ಬೆಂಗಳೂರು: ಈ ಸಂಬಂಧ ಸ್ವಯಂ ಹೇಳಿಕೆ ನೀಡಿದ ಅವರು, ‘ಕೇಂದ್ರ ಜನಗಣತಿ ಇಲಾಖೆಯು ಗಣತಿ ಕಾರ್ಯ ಕೈಗೊಳ್ಳಲಿರುವ ಕಾರಣ ಈ ತಿಂಗಳ 31ರ ನಂತರ ಕಂದಾಯ ಗ್ರಾಮ, ತಾಲ್ಲೂಕು, ಉಪವಿಭಾಗ ಹಾಗೂ ಜಿಲ್ಲೆಯ ಗಡಿಗಳನ್ನು ಬದಲಿಸಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ 30ರ ಒಳಗೆ ಯಾದಗಿರಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕಾಗಿದೆ’ ಎಂದು ತಿಳಿಸಿದರು. ಹೊಸ ಜಿಲ್ಲೆ ರಚನೆಗೆ ಪೂರ್ವಸಿದ್ಧತೆ ನಡೆಸಲು ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ. ಐದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ವಿವಿಧ ಕಚೇರಿಗಳ ಸಂಕೀರ್ಣ ನಿರ್ಮಾಣ ಸಂಬಂಧ ನಿವೇಶನ ಗುರುತಿಸಲು ಸ್ಥಳ ಪರಿಶೀಲನೆ ಕಾರ್ಯ ಮುಗಿದಿದೆ. ಅಂದಾಜು ವೆಚ್ಚದ ಮಾಹಿತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ವಿವರಿಸಿದರು.
ಹಾಲಿ ಯಾದಗಿರಿ ಉಪವಿಭಾಗ ವ್ಯಾಪ್ತಿಯ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚಿಸಲು ಸಚಿವ ಸಂಪುಟದ ಉಪಸಮಿತಿ ಸಲಹೆ ಮಾಡಿತ್ತು. ಈ ಸಲಹೆ ಮೇರೆಗೆ ಗುಲ್ಬರ್ಗದಲ್ಲಿ ಆ. 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದರು.