ನವದೆಹಲಿ(ಐಎಎನ್ಎಸ್): ತಾಯಿಗೆ ತೀವ್ರ ಅಸ್ವಾಸ್ಥ್ಯ ಹಾಗೂ ಕೌಟುಂಬಿಕ ತುರ್ತು ವ್ಯವಹಾರಗಳ ಕಾರಣಗಳಿಗಾಗಿ ಮನುಶರ್ಮಗೆ ಜೈಲಿನಿಂದ ಪರೋಲ್ ಮೇಲೆ ಮನೆಗೆ ತೆರಳುವ ಅವಕಾಶ ನೀಡಲಾಗಿತ್ತು. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 22ರ ವರೆಗೆ ನಿಗದಿಯಾಗಿದ್ದ ಪರೋಲ್ಅನ್ನು ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿನಂತಿಯಂತೆ ಮತ್ತೆ 30 ದಿನಕ್ಕೆ ವಿಸ್ತರಿಸಲಾಗಿತ್ತು.
ಕಾಂಗ್ರೆಸ್ನ ವರ್ಚಸ್ವಿ ರಾಜಕಾರಣಿ ಹರಿಯಾಣದ ವಿನೋದ್ ಶರ್ಮಾ ಅವರ ಪುತ್ರನಾಗಿರುವ ಮನುಶರ್ಮ ‘ಕೌಟುಂಬಿಕ ನೆಪ’ಹೇಳಿ ಜೈಲಿನಿಂದ ಹೊರಬಂದಿದ್ದರೂ ನವದೆಹಲಿಯ ಕೆಲವು ಹೊಟೇಲ್, ಬಾರ್ಗಳಲ್ಲಿ ಠಳಾಯಿಸುತ್ತಿದ್ದುದು, ‘ರೋಗಿ’ ಎಂದು ಹೇಳಲಾಗಿದ್ದ ತಾಯಿ ಶಕ್ತಿರಾಣಿ ಕ್ರಿಕೆಟ್ ಸಂಬಂಧಿ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಾಗ ಪ್ರಕರಣ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿತ್ತು.
ಶಕ್ತಿರಾಣಿ ಅವರು ತಮ್ಮ ಕುಟುಂಬಕ್ಕೆ ಸೇರಿದ್ದ ಪಿಕಾಡಿಲಿ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕ್ರಿಕೆಟ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಮಗ ಮನುಶರ್ಮ ದೆಹಲಿಯ ಅಶೋಕ್ ಮತ್ತು ಸಾಮ್ರಾಟ್ ಹೊಟೇಲ್-ಬಾರ್ಗಳಲ್ಲಿ ವಿಹಾರ ನಡೆಸುತ್ತಿದ್ದುದು ಪುರಾವೆ ಸಹಿತ ಬಹಿರಂಗವಾಯಿತು.
ಇದು ಶೀಲಾ ನೇತೃತ್ವದ ದೆಹಲಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಮನುಶರ್ಮ ಕುರಿತು ವರದಿ ನೀಡಲು ದೆಹಲಿ ಪೊಲೀಸರಿಗೆ ಆದೇಶಿಸಲಾಗಿತ್ತು. ಈ ಹಿನ್ನೆಲೆಯಲಿ ವಿವಾದ ಮತ್ತಷ್ಟು ಬಿಸಿಯೇರುವ ಮೊದಲು ಶರ್ಮ ಅವಧಿಗೆ ಮುನ್ನವೇ ಮತ್ತೆ ಜೈಲಿಗೆ ಹಾಜರಾಗಿದ್ದಾರೆ ಎನ್ನಲಾಗಿದೆ.
ಜೆಸ್ಸಿಕಾ ಅಕ್ಕ ಸಬ್ರೀನಾ ಲಾಲ್ ‘ವಿವಾದಗಳಿಂದ ತಲೆಮರೆಸಿಕೊಳ್ಳಲು ಮನು ವಾಪಸ್ಸಾಗಿರುವ ನಾಟಕ ಆಡಿದ್ದಾರೆ’ ಎಂದು ಟೀಕಿಸಿದ್ದಾರೆ.