ಬೆಂಗಳೂರು: ಪ್ರಕರಣಗಳ ಪತ್ತೆ ಮತ್ತು ವಸ್ತುಗಳ ವಶಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೊಲೀಸರು ವಿವಿಧ ಪ್ರಕರಣಗಳನ್ನು ಭೇದಿಸಿ 95 ಲಕ್ಷ ರೂಪಾಯಿ ಮೌಲ್ಯದ ವಾಹನ ಮತ್ತು ಐವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಒಟ್ಟು 73 ಬೈಕ್ ಮತ್ತು ಹತ್ತು ಕಾರುಗಳನ್ನು ಜಫ್ತಿ ಮಾಡಿದ್ದಾರೆ.
ಕೇಂದ್ರ ಅಪರಾಧ ವಿಭಾಗದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ಇಪ್ಪತ್ತು ಲಕ್ಷ ರೂಪಾಯಿ ಮೌಲ್ಯದ 38 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಗೋವಿಂದರಾಜನಗರದ ಎಂ.ಶಿವರಾಜ್ (19), ಕಾಡುಗೋಡಿಯ ಎಂ. ನಾರಾಯಣಸ್ವಾಮಿ (46), ಶಿವಕುಮಾರ್ (39), ಕೋಲಾರದ ಮಂಜಲಿ ಗ್ರಾಮದ ಸುರೇಶ (28), ಕಾಮಾಕ್ಷಿಪಾಳ್ಯದ ಶ್ರೀರಾಮ್ಪುರ ಜೋಪಡಿಯ ರವಿಕುಮಾರ್ (22) ಮತ್ತು ಅನಿಲ್ ಕುಮಾರ್ (28) ಬಂಧಿತರು.
ಮನೆ ಮುಂದೆ ನಿಲ್ಲಿಸಿರುತ್ತಿದ್ದ ಬೈಕ್ಗಳ ಹ್ಯಾಂಡಲ್ ಲಾಕ್ ಮುರಿಯುತ್ತಿದ್ದ ಆರೋಪಿಗಳು ಅವುಗಳನ್ನು ತುಮಕೂರು, ನೆಲಮಂಗಲ, ಹುಲಿಯೂರು ಮುಂತಾದೆಡೆ ಮಾರಾಟ ಮಾಡುತ್ತಿದ್ದರು. ಕಾಮಾಕ್ಷಿಪಾಳ್ಯ, ಪೀಣ್ಯ, ಯಲಹಂಕ ಮುಂತಾದ ಬಡಾವಣೆಗಳಲ್ಲಿ ಅವರು ಕಳವು ಮಾಡಿದ್ದಾರೆ ಎಂದು ಇನ್ಸ್ಪೆಕ್ಟರ್ ಎಚ್. ಸಿದ್ದಪ್ಪ ತಿಳಿಸಿದ್ದಾರೆ.
ಅಪರಾಧ ವಿಭಾಗದ ಡಿಸಿಪಿ ಎಸ್.ಎಸ್ ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಎಸಿಪಿ ಎಚ್.ಆರ್ ಮಹಾದೇವಯ್ಯ, ಇನ್ಸ್ಪೆಕ್ಟರ್ಗಳಾದ ಸಿದ್ದಪ್ಪ, ಆರ್. ಮಲ್ಲಿಕಾರ್ಜುನಯ್ಯ, ಯಶವಂತ್ ಸಾವರ್ಕರ್, ಎಸ್ಐ ಡಿ. ಹನುಮಂತಯ್ಯ ಮತ್ತು ಮುಖ್ಯ ಪೇದೆ ರಾಜಣ್ಣ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.
ಹೆಣ್ಣೂರು: ಜಯನಗರದ ಆರನೇ ಬ್ಲಾಕ್ನ ಗೋವಿಂದೇಗೌಡ (50), ಹೆಬ್ಬಾಳದ ಭದ್ರಪ್ಪಲೇಔಟ್ನ ಬಾಲಕೃಷ್ಣ (50) ಮತ್ತು ಟಿ. ದಾಸರಹಳ್ಳಿಯ ಕಾಳಹಸ್ತಿನಗರದ ಪುನೀತ್ ಕುಮಾರ್ (50) ಎಂಬುವರನ್ನು ಬಂಧಿಸಿ ಇಪ್ಪತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ಎನ್. ಹನುಮಂತರಾಯ ತಿಳಿಸಿದ್ದಾರೆ. ಇವುಗಳ ಮೌಲ್ಯ 6.72 ಲಕ್ಷ ರೂಪಾಯಿ.
ಮೈಕೋಲೇಔಟ್: ದೇವರಜೀವನಹಳ್ಳಿಯ ಇಮ್ತಿಯಾಜ್ (33) ಎಂಬಾತನನ್ನು ಬಂಧಿಸಿರುವ ಮೈಕೋಲೇಔಟ್ ಪೊಲೀಸರು 25 ಲಕ್ಷ ರೂಪಾಯಿ ಮೌಲ್ಯದ 1.50 ಕೆ.ಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹತ್ತು ವರ್ಷಗಳಿಂದ ಕಳವು ಮಾಡುತ್ತಿರುವ ಆರೋಪಿ ಹಲವು ಪ್ರಕರಣಗಳಲ್ಲಿ ಬಂಧಿತನಾಗಿ ಬಿಡುಗಡೆಯಾಗಿದ್ದ. ಈತನ ಬಂಧನದಿಂದ ಮೈಕೋಲೇಔಟ್ ಠಾಣೆಯಲ್ಲಿ ನಡೆದಿದ್ದ ಹತ್ತೊಂಬತ್ತು ಕನ್ನಕಳವು ಪ್ರಕರಣ ಮತ್ತು ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಪ್ರಕರಣ ಬಗೆಹರಿದಿವೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಬಿ.ಎನ್.ಎಸ್ ರೆಡ್ಡಿ ಹೇಳಿದ್ದಾರೆ.
ಕಾಡುಗೊಂಡನಹಳ್ಳಿ: ಸಾರ್ವಜನಿಕರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ವಿನೋಬನಗರದ ವಹೀದ್ ಖಾನ್ (27) ಎಂಬಾತನನ್ನು ಬಂಧಿಸಿರುವ ಕಾಡುಗೊಂಡನಹಳ್ಳಿ ಪೊಲೀಸರು ಸ್ವಯಂ ಚಾಲಿತ ಪಿಸ್ತೂಲ್ ಮತ್ತು ಮೂರು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮೇಲೆ ಕೊಲೆ ಯತ್ನ, ಹಲ್ಲೆ ಮುಂತಾದ ಪ್ರಕರಣಗಳಿವೆ. ಕಾಡುಗೊಂಡನಹಳ್ಳಿಯಲ್ಲಿ ನಡೆದ ಆನಂದ ಎಂಬಾತನ ಕೊಲೆ ಪ್ರಕರಣದಲ್ಲಿ ವಹೀದ್ ಪ್ರಮುಖ ಆರೋಪಿ ಎಂದು ಇನ್ಸ್ಪೆಕ್ಟರ್ ಟಿ. ರಂಗಪ್ಪ ಮಾಹಿತಿ ನೀಡಿದ್ದಾರೆ.