ಬೆಂಗಳೂರು: ಪ್ರೀತಿಸಿ ಮೋಸ ಮಾಡಿದ ಯುವಕ ಬೇರೊಬ್ಬ ಯುವತಿಯ ಜತೆ ವಿವಾಹವಾಗುತ್ತಿದ್ದಾನೆ ಎಂದು ಆರೋಪಿಸಿದ ಯುವತಿ ವಿವಾಹ ಸಮಾರಂಭ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಿತು.
ನ್ಯಾಯ ಕೇಳಲು ಹೋದ ಯುವತಿ ಪ್ರಿಯಾಂಕ ಮತ್ತು ಆಕೆಯ ಕುಟುಂಬದವರನ್ನು ವರ ಆನಂದ್ನ ಸಂಬಂಧಿಕರು ಅಮಾನವೀಯವಾಗಿ ಥಳಿಸಿದರು. ಇಷ್ಟೆಲ್ಲ ಗೊಂದಲಗಳ ಮಧ್ಯೆಯೂ ಆನಂದ್ ವಿವಾಹ ನೆರವೇರಿತು.
ನಂದಿನಿ ಲೇಔಟ್ನ ಸರಸ್ವತಿನಗರದ ನಿವಾಸಿ ಪ್ರಿಯಾಂಕ ಅವರು ಎಂಬಿಎ ಓದುತ್ತಿದ್ದಾರೆ. ಅವರ ಎದುರು ಮನೆಯ ನಿವಾಸಿಯೇ ಆದ ಆನಂದ್ ಜತೆ ಅವರಿಗೆ ಪ್ರೇಮಾಂಕುರವಾಗಿತ್ತು. ಪರಸ್ಪರರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆನಂದ್ ಬೇರೊಬ್ಬ ಯುವತಿಯ ಜತೆ ವಿವಾಹ ಆಗುತ್ತಿರುವ ವಿಷಯ ತಿಳಿದ ಪ್ರಿಯಾಂಕ ಅವರು ಅಕ್ಟೋಬರ್ 30ರಂದು ನಂದಿನಿಲೇಔಟ್ ಠಾಣೆಗೆ ದೂರು ನೀಡಿದ್ದರು. ಆದರೂ ಪ್ರಯೋಜನ ಆಗಿರಲಿಲ್ಲ.
ಬೆಳಿಗ್ಗೆ 8.15ಕ್ಕೆ ಮಹೂರ್ತ ನಿಗದಿಯಾಗಿತ್ತು. ಬೆಳಿಗ್ಗೆಯೇ ಕಲ್ಯಾಣ ಮಂಟಪಕ್ಕೆ ಬಂದ ಪ್ರಿಯಾಂಕ, ಅವರ ಸಹೋದರಿಯರು ಮತ್ತಿತರರು ವಿವಾಹ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ ಆನಂದ್ ಅವರ ಸಂಬಂಧಿಕರು ಎಲ್ಲರ ಮೇಲೆ ಹಲ್ಲೆ ಮಾಡಿ ಹೊರಗೆ ತಳ್ಳಿದರು. ಗಲಾಟೆ ಮಧ್ಯೆಯೇ ಆನಂದ್ ವಧುವಿಗೆ ತಾಳಿ ಕಟ್ಟಿದರು. ‘ಕಾಲೇಜಿನ ಬಳಿ ಬರುತ್ತಿದ್ದ ಆನಂದ್ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆತನನ್ನು ನಂಬಿದ ನಾನು ಪ್ರೀತಿಸಲು ಆರಂಭಿಸಿದೆ. ನಾಲ್ಕು ವರ್ಷದಿಂದ ಪರಸ್ಪರರು ಪ್ರೀತಿಸುತ್ತಿದ್ದೇವೆ.
ಇಬ್ಬರ ಜಾತಿ ಬೇರೆ ಆದ್ದರಿಂದ ಮನೆಯಲ್ಲಿ ಮದುವೆಗೆ ಒಪ್ಪುವುದು ಕಷ್ಟ. ಆದ್ದರಿಂದ ಗರ್ಭಿಣಿಯಾದರೆ ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಲಾರರು ಎಂದು ಆನಂದ್ ನಂಬಿಸಿದ’ ಎಂದು ಪ್ರಿಯಾಂಕ ಮಾಧ್ಯಮದವರಿಗೆ ತಿಳಿಸಿದರು.
‘ಈಗ ನಾನು ಗರ್ಭಿಣಿಯಾಗಿದ್ದೇನೆ. ಆದರೆ ವಿವಾಹ ಆಗಲು ಆತ ಒಪ್ಪಲಿಲ್ಲ. ಹತ್ತು ಲಕ್ಷ ನೀಡಿದರೆ ಮಾತ್ರ ಮದುವೆಯಾಗುವುದಾಗಿ ಹೇಳಿದ’ ಎಂದು ಅವರು ದೂರಿದರು.
ಆನಂದ್ ಬಗ್ಗೆ ಇಷ್ಟೆಲ್ಲ ಆರೋಪಗಳು ಕೇಳಿ ಬಂದರೂ ವಧುವಿನ ಮನೆಯವರು ಮಾತ್ರ ಯಾವುದೇ ಪ್ರತಿಕ್ರಿಯೆ ತೋರದೆ ವಿವಾಹಕ್ಕೆ ಸಹಕಾರ ಕೊಟ್ಟಿದ್ದು ಮಾತ್ರ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತು.
‘ಆನಂದ್ ಅತ್ಯಾಚಾರ ಮಾಡಿದ್ದಾನೆ ಮತ್ತು ವಂಚನೆ ಮಾಡಿದ್ದಾನೆ ಎಂದು ಪ್ರಿಯಾಂಕ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ತಿಳಿಸಿದ್ದಾರೆ.
ಮದುವೆ ನಿಲ್ಲಿಸಲು ಹೋಗಿದ್ದವರ ಮೇಲೆ ಆನಂದ್ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎಂದು ರಾಜಾಜಿನಗರ ಠಾಣೆಗೆ ಪ್ರಿಯಾಂಕ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಆರೋಪಿ ಆನಂದ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.