ಬೆಂಗಳೂರು: ‘ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಕಾನೂನಿಗೆ ತಿದ್ದುಪಡಿ ತರಲಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ರಾಜ್ಯ ಸಹಕಾರಿ ವಸತಿ ಮಹಾಮಂಡಲವು ನಗರದ ಬಸವನಗುಡಿಯಲ್ಲಿ ನೂತನವಾಗಿ ನಿರ್ಮಿಸಿರುವ ‘ಸಹಕಾರಿ ವಸತಿ ಭವನ’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಹಕಾರಿ ವಸತಿ ಮಹಾಮಂಡಲವು ಸರ್ಕಾರ ಸೇರಿದಂತೆ ಯಾವುದೇ ಸಂಸ್ಥೆಯ ನಿಯಂತ್ರಣಕ್ಕೆ ಒಳಗಾಗದೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಸಲುವಾಗಿ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಸಹಕಾರಿ ಸಂಸ್ಥೆಗಳ ಕಾರ್ಯ ನಿರ್ವಹಣೆ ಸುಗಮವಾಗಲಿದೆ’ ಎಂದರು.
‘ದೇಶದಲ್ಲಿ 1.30 ಕೋಟಿ ಕುಟುಂಬಗಳಿಗೆ ವಸತಿ ಸೌಲಭ್ಯವೇ ಇಲ್ಲ. ರಾಜ್ಯದಲ್ಲೂ 1.22 ಲಕ್ಷ ಮಂದಿ ನಿರ್ಗತಿಕರಿದ್ದಾರೆ. ರಾಜ್ಯದಲ್ಲಿ 6 ಲಕ್ಷ ಮಂದಿ ಇಂದಿಗೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. 15 ಲಕ್ಷ ಕುಟುಂಬಗಳಿಗೆ ಈವರೆಗೆ ಶಾಶ್ವತ ಸೂರು ಇಲ್ಲ. ಅವರಿಗೆ ಸೂರು ಕಲ್ಪಿಸುವ ಯೋಜನೆ ರೂಪಿಸಬೇಕು. ಐದು ವರ್ಷಗಳಲ್ಲಿ ಈ ಗುರಿ ತಲುಪುವಂತೆ ರೂಪುರೇಷೆ ಸಿದ್ದಪಡಿಸಿದರೆ ಬಂಡವಾಳವನ್ನು ಕ್ರೋಢೀಕರಿಸಬಹುದಾಗಿದೆ. ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬಹುದು’ ಎಂದರು.
‘ರಾಜ್ಯದಲ್ಲಿ ನೆರೆ ಹಾವಳಿಯಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಮನೆಗಳು ಹಾಳಾಗಿವೆ. ತುರ್ತಾಗಿ ಮನೆಗಳನ್ನು ನಿರ್ಮಿಸಬೇಕಾದ ಅಗತ್ಯವಿದ್ದು, ಕೇಂದ್ರ ಸರ್ಕಾರ ಈಗಾಗಲೇ ರೂ. 1000 ಕೋಟಿ ಅನುದಾನ ಪ್ರಕಟಿಸಿದೆ. ಆ ಪೈಕಿ 500 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇಂದಿರಾ ಆವಾಸ್ ಯೋಜನೆಯಡಿ ರಾಜ್ಯದಲ್ಲಿ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡುವಂತೆಯೂ ಪ್ರಧಾನಮಂತ್ರಿಗೆ ಮನವಿ ಮಾಡಲಾಗಿದೆ’ ಎಂದು ಖರ್ಗೆ ತಿಳಿಸಿದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ‘ಸರ್ಕಾರವು ಈ ಕ್ಷೇತ್ರಕ್ಕೆ ಸಹಕಾರ ನೀಡದಿದ್ದರೂ, ಹಸ್ತಕ್ಷೇಪ ಮಾಡುವುದು ಮುಂದುವರಿದಿದೆ. ಇನ್ನು ಮುಂದಾದರೂ ರೈತರಿಂದ ನೇರವಾಗಿ ಭೂಮಿ ಖರೀದಿ ಮಾಡಲು ಅವಕಾಶ ನೀಡಬೇಕು. ಸಹಕಾರಿ ಸಂಸ್ಥೆಗಳು ಗಳಿಸುವ ಲಾಭದ ಮೇಲೆ ವಿಧಿಸಲಾಗುವ ಶೇ 30ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು’ ಎಂದರು.
ರಾಜ್ಯ ಸಹಕಾರಿ ವಸತಿ ಮಹಾಮಂಡಳದ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಕೊಪ್ಪಳ ಸಂಸದ ಶಿವರಾಮಗೌಡ ಇತರರು ಉಪಸ್ಥಿತರಿದ್ದರು.