ಬೆಂಗಳೂರು: ವಿಧಾನ ಪರಿಷತ್ನ ಹಲವು ಸ್ಥಾನಗಳಿಗೆ ಡಿಸೆಂಬರ್ನಲ್ಲಿ ನಡೆಯುವ ಚುನಾವಣೆ ತಯಾರಿ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬುಧವಾರ ಸಂಜೆ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು.
ಸಚಿವರಾದ ಆರ್.ಅಶೋಕ್, ಎಸ್.ಸುರೇಶ್ಕುಮಾರ್, ಆರ್ಎಸ್ಎಸ್ ಮುಖಂಡ ವಿ.ಸತೀಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದು, ವಿಧಾನ ಪರಿಷತ್ ಚುನಾವಣೆ ಗೆಲುವಿಗೆ ಕಾರ್ಯತಂತ್ರ ರೂಪಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ.
‘25 ಸ್ಥಾನಗಳಿಗೆ ಡಿಸೆಂಬರ್ 18ರಂದು ಚುನಾವಣೆ ನಡೆಯಲಿದೆ. ಈ ಪೈಕಿ ಕನಿಷ್ಠ 15 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಕ್ಷದ ಜಿಲ್ಲಾ ಮುಖಂಡರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಇದೇ 24ರ ಒಳಗಾಗಿ ಕಳುಹಿಸಬೇಕು’ ಎಂಬ ಸೂಚನೆಯನ್ನು ಸದಾನಂದಗೌಡ ಈ ಸಂದರ್ಭದಲ್ಲಿ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.