ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳಲ್ಲಿನ ಚುನಾವಣಾ ಗೆಲುವಿನಿಂದ ಬಿಗುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಇದೇ ಗುರುವಾರದಿಂದ ಆರಂಭವಾಗುತ್ತಿರುವ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಬಿಗಿಪಟ್ಟಿಗೆ ಉತ್ತರಿಸಲು ತಿಣುಕಾಡುವ ಸಾಧ್ಯತೆಯಿದೆ.
ರೈತರ ಸಮಸ್ಯೆ ಹಾಗೂ ಏರುತ್ತಿರುವ ದರದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಎಡಪಕ್ಷಗಳು ಹಾಗೂ ಬಿಜೆಪಿ ಸಜ್ಜಾಗಿವೆ.
‘ದೂರ ಸಂಪರ್ಕ ಕ್ಷೇತ್ರದಲ್ಲಿನ ಹಗರಣ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ವಿರುದ್ಧದ ಆರೋಪ, ದರ ಏರಿಕೆ ಹಾಗೂ ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿವೇಶನದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲಾಗುವುದು’ ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಲಾಭದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿನ ಬಂಡವಾಳ ಹಿಂತೆಗೆಯುವುದು ಹಾಗೂ ದರ ಏರಿಕೆ ವಿಷಯಗಳನ್ನು ಎಡಪಕ್ಷಗಳು ಪ್ರಧಾನವಾಗಿ ಪ್ರಸ್ತಾಪಿಸಲಿವೆ.
‘ಅಧಿವೇಶನದ ಮೊದಲ ದಿನವೇ ದರ ಏರಿಕೆ ಸಮಸ್ಯೆ ವಿಷಯ ಮಂಡಿಸಲಾಗುವುದು’ ಎಂದು ಸಿಪಿಎಂ ನಾಯಕ ಬಸುದೇವ್ ಆಚಾರ್ಯ ತಿಳಿಸಿದ್ದಾರೆ.
ಚರ್ಚೆಗೆ ಕಾಂಗ್ರೆಸ್ ಸಜ್ಜು: ಶ್ರೀಸಾಮಾನ್ಯರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ ಎಂದು ಪಕ್ಷದ ವಕ್ತಾರ ಶಕೀಲ್ ಅಹಮದ್ ವಿವರಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರು ಬೆಳೆಗಳಿಗೆ ಉತ್ತಮ ದರ ಪಡೆಯುತ್ತಿದ್ದಾರೆ. ದೇಶದಲ್ಲಿ ದರ ಏರಿಕೆಯಾಗಲು ಇದೂ ಒಂದು ಕಾರಣವಿರಬಹುದು. ಅಕ್ರಮ ದಾಸ್ತಾನುದಾರರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅಕ್ರಮ ದಾಸ್ತಾನುದಾರರು ಹಾಗೂ ಕಾಳಸಂತೆಕೋರರನ್ನು ಹತ್ತಿಕ್ಕಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.
ಡಿಸೆಂಬರ್ 21ಕ್ಕೆ ಅಧಿವೇಶನ ಕೊನೆಯಾಗುವ ಸಾಧ್ಯತೆ ಇದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50 ಮೀಸಲಾತಿ, ಸಮಾನ ಅವಕಾಶಗಳ ಆಯೋಗ ರಚನೆ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಮಸೂದೆ ಮಂಡಿಸಲು ಸರ್ಕಾರ ತಯಾರಿ ಮಾಡಿಕೊಂಡಿದೆ.
ವಾಣಿಜ್ಯ ಕೋರ್ಟ್ ಸ್ಥಾಪನೆ ಹಾಗೂ ನ್ಯಾಯಾಂಗ ತನಿಖಾ ಮಸೂದೆಗಳನ್ನು ಮಂಡಿಸುವ ಬಗ್ಗೆ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಈಗಾಗಲೇ ಸಂದೇಶ ರವಾನಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅವ್ಯವಹಾರ ನಡೆಸುವವರಿಗೆ ಶಿಕ್ಷೆ ವಿಧಿಸಲು ಹಾಗೂ ಶೈಕ್ಷಣಿಕ ರಂಗದ ವಿವಾದಗಳನ್ನು ಬಗೆಹರಿಸಲು ಪ್ರತ್ಯೇಕ ನ್ಯಾಯಮಂಡಳಿ ರಚನೆ ಬಗ್ಗೆ ಪ್ರಸ್ತಾಪಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಯಾರಿ ಮಾಡಿಕೊಂಡಿದೆ. ನೆನೆಗುದಿಗೆ ಬಿದ್ದಿರುವ ಕೋಮ ಪ್ರಚೋದಿತ ಹಿಂಸಾ ತಡೆ ಮಸೂದೆ, ಮಹಿಳಾ ಮೀಸಲಾತಿ ಮಸೂದೆ ಹಾಗೂ ಮೋಟಾರು ವಾಹನ ತಿದ್ದುಪಡಿ ಮಸೂದೆಗಳು ಕಡತದಿಂದ ಹೊರಬರಲಿವೆಯೇ ಎಂದು ಕಾದು ನೋಡಬೇಕಿದೆ. ವಿದೇಶಿ ವ್ಯಾಪಾರ ಅಭಿವೃದ್ಧಿ ಮಸೂದೆ (ತಿದ್ದುಪಡಿ), ಪಿಂಚಣಿ ನಿಧಿ ನಿಯಂತ್ರಣ ಪ್ರಾಧಿಕಾರದ ಮಸೂದೆ ಹಾಗೂ ನೇರ ತೆರಿಗೆ ನೀತಿಯನ್ನು ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ಕಲಹದಲ್ಲಿ ಮುಳುಗಿರುವ ಭಾರತೀಯ ಜನತಾ ಪಕ್ಷ, ವಂದೇ ಮಾತರಂ ಹಾಡುವುದರ ವಿರುದ್ಧ ಹೊರಡಿಸಿರುವ ಫತ್ವಾ ಬಗ್ಗೆ ಗಟ್ಟಿದನಿ ಮೊಳಗಿಸುವ ನಿರೀಕ್ಷೆಯಿದೆ. ತರಂಗಾಂತರ ಹಂಚಿಕೆ ವಿವಾದದ ಕುರಿತೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಮಾವೋವಾದಿಗಳ ನಡುವೆ ಸಂಪರ್ಕವಿದೆ ಎಂದು ಎಡಪಕ್ಷಗಳು ಗದ್ದಲ ಎಬ್ಬಿಸಲಿವೆ. ಅದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸುವ ನಿರೀಕ್ಷೆಯಿದೆ.