ರಾಂಚಿ (ಪಿಟಿಐ): 'ಬರಲಿರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಮತಗಳನ್ನು ಧ್ರುವೀಕರಿಸಲು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಈ ವರದಿಯನ್ನು ಸೋರಿಕೆ ಮಾಡಿದೆ' ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ. ಪಕ್ಷದ ಪ್ರಚಾರಕ್ಕಾಗಿ ರಾಂಚಿಗೆ ಆಗಮಿಸಿದ್ದ ಅವರು ತಮ್ಮನ್ನು ಸಂಪರ್ಕಿಸಿದ ವರದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.
ಲಿಬರಾನ್ ಆಯೋಗ ಜೂನ್ 30ರಂದು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಈ ವರದಿ ಸಂಸತ್ ನಲ್ಲಿ ಮಂಡನೆಯಾಗಿರಲಿಲ್ಲ. ಸಂಸತ್ ನಲ್ಲಿ ಚರ್ಚೆಯಾಗದೆ ಮಾಧ್ಯಮಗಳಿಗೆ ಲಿಬರಾನ್ ಆಯೋಗದ ವರದಿ ಸೋರಿಕೆಯಾಗಿರುವುದು ಬಿಜೆಪಿಯನ್ನು ಕೆರಳಿಸಿದೆ.
'ವರದಿ ಸೋರಿಕೆಯಾಗಿರುವುದು ತಮಗೆ ತೀವ್ರ ಅಚ್ಚರಿಯನ್ನುಂಟುಮಾಡಿದೆ'. ಲಿಬರಾನ್ ಆಯೋಗ ಸಲ್ಲಿಸಿರುವ ವರದಿ ಕುರಿತು ಸಂಸತ್ ನಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ, ಲೋಕಸಭಾ ಸ್ವೀಕರ್ ಮೀರಾ ಕುಮಾರ್ ಅವರಿಗೆ ತಾವು ಈಗಾಗಲೇ ಮನವಿ ಸಲ್ಲಿಸಿರುವುದಾಗಿ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ ತಿಳಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಘಟನೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತಿತರ ಬಿಜೆಪಿ ಮುಖಂಡರನ್ನು ಹೊಣೆ ಮಾಡಲಾಗಿದೆ ಎಂದು ಲಿಬರಾನ್ ಆಯೋಗದ ವರದಿಯನ್ನು ಉಲ್ಲೇಖಿಸಿದ ಪತ್ರಿಕಾ ವರದಿ ತಿಳಿಸಿತ್ತು.