ದಾವಣಗೆರೆ: ‘ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ನೀತಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರವನ್ನು ಮೊಟಕುಗೊಳಿಸಿ ಪಾಲಿಕೆ ಹಾಗೂ ನಗರಸಭೆಗೆ ಅಧಿಕಾರ ನೀಡುವ ಅಂಶ ಸೇರಿಸಲಾಗಿದೆ’ ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ನಗರಾಭಿವೃದ್ಧಿ ನೀತಿ’ಯ ಕರಡು ಪ್ರತಿ ಸಿದ್ಧಗೊಂಡಿದೆ. ಅದರ ಅಂತಿಮ ವರದಿಯನ್ನು ಜ. 15ರಂದು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಅದಕ್ಕೂ ಮೊದಲು ಡಿ. 4ರಂದು ಮೈಸೂರಿನಲ್ಲಿ ನಡೆಯುಲಿರುವ ಮೇಯರ್, ಉಪ ಮೇಯರ್ ಹಾಗೂ ಆಯುಕ್ತರ ಕಾರ್ಯಾಗಾರದಲ್ಲಿ ಹೊಸ ನೀತಿ ಕುರಿತು ಚರ್ಚೆ ನಡೆಸಲಾಗುವುದು ಎಂದ ಅವರು, ಈ ನೀತಿಗೆ ಸಂಬಂಧಿಸಿದಂತೆ ಪರಿಣತರು ಸಲಹೆ ನೀಡಬಹುದು ಎಂದರು.
ನಗರ ಪ್ರದೇಶಗಳಲ್ಲಿ ಆಡಳಿತ ಸುಧಾರಣೆ, ಅಭಿವೃದ್ಧಿ, ಸಿಬ್ಬಂದಿ ನಿರ್ವಹಣೆ ಹಾಗೂ ಗುಣಮಟ್ಟದ ಕೆಲಸ ನಿರ್ವಹಿಸುವ ಅಂಶಗಳು ನೀತಿಯಲ್ಲಿ ಅಡಕವಾಗಿವೆ. ಪಾಲಿಕೆ ಹಾಗೂ ನಗರಸಭೆಯಲ್ಲಿ ಪ್ರತ್ಯೇಕ ವಿಭಾಗ ರಚಿಸಿ, ಅದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ನೀಡಲಾಗುವುದು. 213 ಇತರೇ ಸ್ಥಳೀಯ ಸಂಸ್ಥೆಗಳಿಗೆ ನಗರಾಭಿವೃದ್ಧಿ ನೀತಿಯ ಕರಡು ಪ್ರತಿ ಕಳುಹಿಸಲಾಗಿದೆ ಎಂದು ಹೇಳುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರ ಇನ್ನೂ ಮುಂದೆ ತೆರೆಮರೆಗೆ ಸರಿಯುವ ಮುನ್ಸೂಚನೆ ನೀಡಿದರು.