ಹಾಡುಗಳು ಹಿಟ್ ಆಗಿರುವುದರ ಗುಂಗಲ್ಲಿ ಜನ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆಂಬ ವಿಶ್ವಾಸ. ನಾಯಕ ತರುಣ್ಗೆ ಈ ಚಿತ್ರವಾದರೂ ತಮಗೆ ಬ್ರೇಕ್ ನೀಡೀತೆ ಎಂಬ ತವಕ. ನಿರ್ಮಾಪಕ ಎಸ್.ಜಿ.ಕೃಷ್ಣಮೂರ್ತಿ ಸಂತೋಷ್ ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬುದಕ್ಕೇ ಖುಷಿಪಟ್ಟರು.
ಮುಂಬೈನಿಂದ ಬಂದಿದ್ದ ನಾಯಕಿ ರೇಖಾ ಅಪರೂಪಕ್ಕೆ ಮಾತಿಗಿಳಿದರು. ಸಂಗೀತ ಹಾಗೂ ಕಥೆಯೇ ಚಿತ್ರವನ್ನು ಗೆಲ್ಲಿಸುತ್ತದೆ ಎಂಬ ವಿಶ್ವಾಸ ಅವರದ್ದು. ಮೃದು ಮಧುರ ಪ್ರೇಮಕಥೆ ಇದು. ಚಿತ್ರದ ನಿರೂಪಣೆ ಚೆನ್ನಾಗಿದೆ. ದೀರ್ಘ ಕಾಲ ಕಾದಿದ್ದಕ್ಕೂ ಬೆಂಗಳೂರಿನಲ್ಲಿ ಒಳ್ಳೆಯ ಚಿತ್ರಮಂದಿರ ಸಿಕ್ಕಿತು ಎಂದು ತರುಣ್ ತಡೆದು ತಡೆದು ಹೇಳಿದರು.
ತಾವು ಬರೆದ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಎಂದವರು ಕವಿರಾಜ್. ‘ಏನೆಂದರೂ ಸುಂದರ ಸುಳ್ಳು’ ಎಂಬ ಸಾಲು ಹೇಳಿ ಪ್ರಿಯತಮೆಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಹುಡುಗನೊಬ್ಬ ಇ-ಮೇಲ್ ಮಾಡಿ ತನ್ನ ದುಃಖ ಹಂಚಿಕೊಂಡನಂತೆ. ಸಾಲುಗಳ ಅರ್ಥವನ್ನು ತಪ್ಪಾಗಿ ಭಾವಿಸಿದರೆ ಹೀಗಾಗುತ್ತದೆ ಎಂದು ಕವಿರಾಜ್ ನಕ್ಕರು.
‘ಎದೆಯಲ್ಲಿ ಕನಸು ನೂರು ಜಿಗಿಜಿಗಿಜಿಗಿದು’ ಹಾಡು ಡೀಜೆ ಗೀತೆಯಾಗಿದೆ ಎಂದು ಅವರು ಮಾತು ಸೇರಿಸಿದರು. ಕಣ್ಣಲ್ಲಿ ಮಾತಾಡಿ, ಮನಸ್ಸಲ್ಲಿ ಪ್ರೀತಿ ಮಾಡುವ ಈ ಚಿತ್ರ ನಿಜಕ್ಕೂ ವಿಭಿನ್ನ ಎಂದವರು ಮಾತು ಬರೆದಿರುವ ಸಾಯಿಕೃಷ್ಣ.
‘ಹಾಡು ಸಂತೋಷಕ್ಕೆ’ ಎಂಬ ಚಿತ್ರದ ತಮ್ಮ ಕಥೆಯನ್ನು ಸಂಜಯ್ ಕದ್ದಿದ್ದಾರೆ ಎಂದು ಗೆಳೆಯ ಆನಂದ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ‘ಪರಿಚಯ’ ಕದ್ದ ಕಥೆ ಅಲ್ಲವೇ ಅಲ್ಲ ಎಂದು ಸಂಜಯ್ ವಾಣಿಜ್ಯ ಮಂಡಳಿಗೂ ಮನದಟ್ಟು ಮಾಡಿಸಿದ್ದಾರೆ. ‘ಹಾಡು ಸಂತೋಷಕ್ಕೆ’ ಕೂಡ ತಮ್ಮದೇ ಕಥೆ ಎಂದು ಸಂಜಯ್ ಎದೆಮುಟ್ಟಿಕೊಂಡು ಹೇಳಿದರು. ಸ್ಟೈಲಿಶ್ ಆಗಿರುವ ‘ಪರಿಚಯ’ ಯುವಕರ ಮನಸ್ಸನ್ನು ಖಂಡಿತ ಗೆಲ್ಲುತ್ತದೆ ಎಂಬುದು ಸಂಜಯ್ ವಿಶ್ವಾಸ.
ತರುಣ್ ತಂಗಿಯ ಪಾತ್ರದಲ್ಲಿ ನಟಿಸಿರುವ ಮೋನಿಷಾ ಅವಕಾಶ ಕೊಟ್ಟವರಿಗೆ ಧನ್ಯವಾದ ಸಲ್ಲಿಸಿದರು. ಎರಡನೇ ನಾಯಕಿ ಸಿಂಧು ‘ಚಿತ್ರವನ್ನು ಪ್ರೀತಿಯಿಂದ ಮಾಡಿದೀವಿ. ಆಶೀರ್ವದಿಸಿ’ ಎಂದು ಹೇಳಿ ಕೂತರು.