ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ನೆರವು ನೀಡಲು ಮುಂದಾಗಿರುವ ಚೀನಾ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ ಇದು ಚೀನಾ-ಭಾರತ ನಡುವಣ ಸಂಬಂಧಗಳ ಮೇಲೆ ದೂರಗಾಮಿ ಪರಿಣಾಮಬೀರಬಹುದೆಂದು ಹೇಳಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ ಅರುಣಾಚಲ ಪ್ರದೇಶ ಭೇಟಿಯನ್ನು ಆಕ್ಷೇಪಿಸಿದ ಚೀನಾಕ್ಕೆ ತಿರುಗೇಟು ನೀಡಿರುವ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಚೀನಾದ ನಿರಂತರ ಸಹಕಾರವಿರುತ್ತದೆ ಎಂಬ ಚೀನಾ ಅಧ್ಯಕ್ಷ ಹು ಜಿಂಟಾವೋ ಅವರ ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪಾಕಿಸ್ತಾನ 1947ರಿಂದಲೂ ಭಾರತದ ಜಮ್ಮು-ಕಾಶ್ಮೀರ ರಾಜ್ಯದ ಕೆಲವು ಭಾಗಗಳನ್ನು ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ. ಈ ವಿಷಯದಲ್ಲಿ ಭಾರತದ ನಿಲುವು ಏನೆಂಬುದು ಚೀನಾಕ್ಕೆ ಸ್ಪಷ್ಟವಾಗಿ ತಿಳಿದಿದೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸರ್ಕಾರ ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಚೀನಾ ಸಹಕರಿಸುವ ವಿಷಯದಲ್ಲಿ ನಮ್ಮ ಕಾಳಜಿಯನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ಖಾತೆಯ ವಕ್ತಾರ ವಿಷ್ಣು ಪ್ರಕಾಶ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ಚೀನಾ ದೂರದೃಷ್ಟಿಯನ್ನಿಟ್ಟುಕೊಂಡು ಪಾಕ್ ಆಕ್ರಮಿತ ಪ್ರದೇಶದಲ್ಲಿ ಅನುಷ್ಠಾನಗೊಳ್ಳುವ ಪಾಕಿಸ್ತಾನೀ ಯೋಜನೆಗಳಿಗೆ ಸಹಕಾರ ನೀಡುವುದನ್ನು ನಿಲ್ಲಿಸಬೇಕು ವಿಷ್ಣು ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನದ ಪ್ರದಾನಿ ಯೂಸುಫ್ ರೆಝಾ ಗಿಲಾನಿ ಮತ್ತು ಚೀನಾದ ಅಧ್ಯಕ್ಷ ಹು ಜಿಂಟಾವೋ ನಿನ್ನ ನಡೆಸಿದ ಸಭೆಯಲ್ಲಿ ಪಾಕಿಸ್ತಾನ ಮತ್ತು ಚೀನಾಗಳಿಗೆ ಭೂಮಾರ್ಗವಾಗಿ ಸಂಪರ್ಕ ಕಲ್ಪಿಸುವ ಕಾರಕೋರಂ ಹೆದ್ದಾರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದು ಹಾಗೂ ಪಾಕ್ ಅಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನೀಲಂ-ಝೆಲುಂ ಜಲವಿದ್ಯುತ್ ಸ್ಥಾವರ ಯೋಜನೆಗಳಿಗೆ ಚೀನಾ ತನ್ನ ಸಹಕಾರವನ್ನು ಘೋಷಿಸಿತ್ತು.