ಶೃಂಗೇರಿ: ಇಲ್ಲಿಗೆ ಸಮೀಪದ ಯಡದಳ್ಳಿ ಕಾಲೋನಿಯ ಚಂದ್ರು ಬಿನ್ ಗೋಪಾಲ (27), ನಾರಾಯಣ ಬಿನ್ ಕಾಳಯ್ಯ (21) ಎಂಬುವರನ್ನು ಸೋಮವಾರ ರಾತ್ರಿ ನೆಮ್ಮಾರಿನ ಮಾಣಿಬೈಲು ಬಳಿ ಪೊಲೀಸ್ ಇನ್ಸ್ಪೆಕ್ಟರ್ ಸದಾನಂದ ತಿಪ್ಪಣ್ಣನವರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ದ್ವಿಚಕ್ರ ವಾಹನವನ್ನೂ ವಶಪಡಿಸಿಕೊಂಡಿದೆ.
ಆರೋಪಿಗಳು ಕಳೆದ 3-4 ವರ್ಷಗಳಿಂದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ, ಮಂಡಗಾರು ಲತಾ, ಹೊಸಗದ್ದೆ ಪ್ರಭಾ ಸೇರಿದಂತೆ ಪ್ರಮುಖ ನಕ್ಸಲರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ನಕ್ಸಲರಿಗೆ ಬೇಕಾದ ವಸ್ತುಗಳನ್ನು ಒದಗಿಸುವುದು, ಅವರು ನೀಡಿದ ಭಿತ್ತಿಪತ್ರ ಅಂಟಿಸುವುದು, ಕರಪತ್ರ ಹಂಚುವುದು ಮೊದಲಾದ ಕೆಲಸ ಮಾಡುತ್ತಿದ್ದರು. ಇದನ್ನು ತನಿಖೆ ವೇಳೆ ಬಂಧಿತರಿಬ್ಬರೂ ಒಪ್ಪಿಕೊಂಡಿದ್ದಾರೆ.
ಇದೇ 3ರಂದು ರಾತ್ರಿ ಕುಂಚೇಬೈಲು ಶಾಲೆ ಹಾಗೂ ಬಸ್ ನಿಲ್ದಾಣದಲ್ಲಿ ಭಿತ್ತಿಪತ್ರ ಅಂಟಿಸಿದ್ದು, ಕರಪತ್ರಗಳನ್ನು ಎಸೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಬಂಧಿತ ಆರೋಪಿಗಳನ್ನು ಮಾಧ್ಯಮದವರೆದು ಪ್ರದರ್ಶಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಸುದ್ದಿಗಾರರ ಜತೆ ಮಾತನಾಡಿ, ದಲಿತ ಮತ್ತು ಗಿರಿಜನ ಸಂಘಟನೆಗಳ ಪ್ರಮುಖರು ಬುಧವಾರ ಪೊಲೀಸ್ ಇನ್ಸ್ಪೆಕ್ಟರ್ರನ್ನು ಭೇಟಿ ಮಾಡಿ, ‘ನಕ್ಸಲ್ ಪರ ಸಹಾಯ ಮಾಡುತ್ತಿರುವ ವ್ಯಕ್ತಿಗಳನ್ನು, ಅಂತಹ ಚಟುವಟಿಕೆ ಬೆಂಬಲಿಸುವವರನ್ನು ಹತ್ತಿಕ್ಕುವ ಪೊಲೀಸರ ಕ್ರಮ ಸ್ವಾಗತಿಸುತ್ತೇವೆ. ಆದರೆ ತಮಗೆ ರಕ್ಷಣೆ ನೀಡಬೇಕು’ ಎಂದು ಕೋರಿದ್ದಾಗಿ ಎಸ್ಪಿ ವಿವರಿಸಿದರು. ದಿಂಡೋಡಿಯ ಗುಂಡಿನ ಚಕಮಕಿ ನಂತರ ನಕ್ಸಲ್ ಚಟುವಟಿಕೆ ಬಗ್ಗೆ ಕೈಗೊಂಡ ಯಶಸ್ವೀ ಕಾರ್ಯಾಚರಣೆ ಇದಾಗಿದೆ ಎಂದೂ ತಿಳಿಸಿದರು.
ಹೆಚ್ಚುವರಿ ಎಸ್ಪಿ ಮುತ್ತೂರಾಯ, ನಕ್ಸಲ್ ನಿಗ್ರಹ ದಳದ ಪ್ರಭಾಕರ್, ಡಿವೈಎಸ್ಪಿ ಅಬ್ದುಲ್ ಅಹಾದ್, ಇನ್ಸ್ಪೆಕ್ಟರ್ ಸದಾನಂದ ತಿಪ್ಪಣ್ಣನವರ್, ಸಬ್ ಇನ್ಸ್ಪೆಕ್ಟರ್ ಸಚಿನ್ ಸುದ್ದಿಗೋಷ್ಠಿಯಲ್ಲಿದ್ದರು.