ಬೆಂಗಳೂರು: ಬೆಳಿಗ್ಗೆ ಒಂದು ಗಂಟೆ ಮುಂಚಿತವಾಗಿ ಕಚೇರಿ ತಲುಪಬೇಕು. ಸಂಜೆ ಒಂದು ಗಂಟೆ ತಡವಾಗಿ ಮನೆಗೆ ಹೊರಡಬೇಕು ಎನ್ನುವ ಆದೇಶವನ್ನು ಹೊರಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಇದಕ್ಕೆ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಒಪ್ಪಿಗೆ ಸೂಚಿಸಿದ್ದು, ಆರು ತಿಂಗಳ ಕಾಲ ಈ ರೀತಿ ಕೆಲಸ ಮಾಡುವಂತೆ ಕೋರಲಾಗಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಸುತ್ತೋಲೆ ಹೊರಬೀಳುವ ಸಾಧ್ಯತೆ ಇದೆ.
ಸರ್ಕಾರದ ಹೊಸ ತೀರ್ಮಾನದ ಪ್ರಕಾರ ಬೆಳಿಗ್ಗೆ 9ರಿಂದ ಸಂಜೆ 6.30ರವರೆಗೆ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಚೇರಿಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ. ಈ ಹೊಸ ವ್ಯವಸ್ಥೆ ಎಂದಿನಿಂದ ಜಾರಿಗೆ ಬರುತ್ತದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಜಿಂದಾಲ್ಗೆ ಸಿಎಂ ವಾಪಸ್: ನಗರದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟದ ತುರ್ತು ಸಭೆ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ರಾಂತಿ ಸಲುವಾಗಿ ಪುನಃ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ವಾಪಸಾದರು.
ಸೋಮವಾರ ಸಂಜೆಯೇ ವಿಶ್ರಾಂತಿಗೆ ತೆರಳಿದ್ದ ಅವರು ಸಂಪುಟ ಸಭೆ ಹಿನ್ನೆಲೆಯಲ್ಲಿ ಸಂಜೆ ವಿಧಾನಸೌಧಕ್ಕೆ ಆಗಮಿಸಿದರು. ಇದಾದ ನಂತರ ಜಿಂದಾಲ್ಗೆ ವಾಪಸಾಗಿರುವ ಅವರು ಇನ್ನೂ ಎರಡು ದಿನ ಅಲ್ಲೇ ಉಳಿಯುವ ಸಾಧ್ಯತೆ ಇದೆ. ಈ ನಡುವೆ, ಇದೇ 15ರಿಂದ ನೆರೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಬೇಕಿದ್ದ ಕಾರ್ಯಕ್ರಮವನ್ನೂ ಅವರು ಮುಂದಕ್ಕೆ ಹಾಕಿದ್ದಾರೆ ಎಂದು ಗೊತ್ತಾಗಿದೆ.
ಮುಖ್ಯಮಂತ್ರಿಯವರು ಈ ಕೂಡಲೇ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುವುದರಿಂದ ಪರಿಹಾರ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ದೀಪಾವಳಿ ನಂತರ ಪ್ರವಾಸ ಕೈಗೊಳ್ಳುವುದು ವಿಹಿತ ಎಂದು ಕೆಲವು ಸಚಿವರು ನೀಡಿದ ಸಲಹೆಗೆ ಅವರು ಓಗೊಟ್ಟಿದ್ದಾರೆ ಎನ್ನಲಾಗಿದೆ.