ಶ್ರೀನಗರ(ಪಿಟಿಐ): ಕಾಶ್ಮೀರ ಹಾಗೂ ದೇಶದ ಇತರ ಭಾಗಗಳಿಗೆ ಕೊಂಡಿ ಯಾಗಿರುವ ಅನಂತನಾಗ್- ಕಾಜಿಗಂದ್ ರೈಲು ಮಾರ್ಗ ವನ್ನು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಉದ್ಘಾಟಿಸಲಿದ್ದಾರೆ.
ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಸಿಂಗ್ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಕಾರ್ಯಕ್ರಮದ ನಂತರ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಸಚಿವರಾದ ಗುಲಾಂ ನಬಿ ಆಜಾದ್, ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾರ್ಜಿ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಟ್ಟೆಚ್ಚರ: ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಶ್ಮೀರಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ವಿಶೇಷ ರಕ್ಷಣಾ ದಳ (ಎಸ್ಪಿಜಿ)ದ ನೇತೃತ್ವದಲ್ಲಿ ಮೂರು ಹಂತಗಳ ಭಾರಿ ಭದ್ರತೆ ಒದಗಿಸಲಾಗಿದೆ.
ಭದ್ರತೆ ದೃಷ್ಟಿಯಿಂದ ರೈಲು ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಬುಧವಾರ ಮತ್ತು ಗುರುವಾರ ವಿವಿಧ ಕಾರ್ಯಕ್ರಮಗಳಲ್ಲಿ ಸಿಂಗ್ ಮತ್ತು ಸೋನಿಯಾ ಭಾಗವಹಿಸುವರು.