ಬೆಂಗಳೂರು: ‘ಆತಂಕ ಇರುವುದು ನಿಜ. ಆದರೆ ಆತ್ಮವಿಶ್ವಾಸ ಕುಂದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾವೋದ್ವೇಗದಿಂದ ನುಡಿದರು.
ನಗರದ ವಿ.ಎಚ್.ಡಿ.ಕೇಂದ್ರ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಾಗೂ ಕಾಲೇಜು ಶಿಕ್ಷಣ ಇಲಾಖೆ ಜಂಟಿಯಾಗಿ ಮಂಗಳವಾರ ಏರ್ಪಡಿಸಿದ್ದ ‘ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ’ ಹಾಗೂ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತಾಡಿದರು.
‘ಸರ್ಕಾರ ಇರುತ್ತದೆ, ಹೋಗುತ್ತದೆ. ಹಾಗೆಯೇ ರಾಜಕಾರಣಿಗಳು ಸಹ ಬರುತ್ತಾರೆ ಹೋಗುತ್ತಾರೆ. ಒಳ್ಳೆ ಕೆಲಸ ಮಾಡುವವರನ್ನು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಅಪರಾಧಿಯಂತೆ ನೋಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ನಾನು ನಿರಾಶನಾಗಿಲ್ಲ, ಎಲ್ಲರ ಸಹಕಾರ ದೊರೆತರೆ ಹಿಂದಿನ ಸರ್ಕಾರಗಳು 60 ವರ್ಷದಲ್ಲಿ ಮಾಡಲಾಗದ್ದನ್ನು ಈಗ ಮಾಡುತ್ತೇನೆ’ ಎಂದು ಹೇಳಿದರು.
‘ಪ್ರವಾಹದಿಂದ ನಾಡಿನ ಜನ ತೀವ್ರ ಕಷ್ಟದಲ್ಲಿದ್ದಾರೆ. 100 ವರ್ಷದಲ್ಲಿ ಕಂಡರಿಯದ ಪ್ರವಾಹದಿಂದ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಕೈಬಿಚ್ಚಿ ಕೊಡುತ್ತಿದ್ದವರು, ಇಂದು ಕೈಚಾಚಿ ಬೇಡುವ ಸ್ಥಿತಿಗೆ ಬಂದಿದ್ದಾರೆ. ಇದೆಲ್ಲದ್ದರಿಂದ ನಾನು ದುಃಖಿತನಾಗಿದ್ದೇನೆ. ರಾಜ್ಯದಲ್ಲಿ ನೆರೆ ಪೀಡಿತ ಪ್ರದೇಶದ ಸಂತ್ರಸ್ತರ ಪುನರ್ವಸತಿ ಕಾರ್ಯಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ಮಂಗಳವಾರ ಸುಮಾರು ಮೂರು ತಾಸು ಸಂಪುಟದ ಸಹೋದ್ಯೋಗಿಗಳ ಜತೆ ಚರ್ಚಿಸಿದ್ದೇನೆ’ ಎಂದರು.
‘ಈ ವಿಚಾರದಲ್ಲಿ ಜನತೆ ನಂಬಿಕೆ ಮತ್ತು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎನ್ನಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಅಥವಾ ಹೆತ್ತ ತಾಯಿಯೇ ಕೂಸಿಗೆ ವಿಷ ಕುಡಿಸಿದರೆ ಹೇಗೆ ಎಂಬ ಭಾವನೆ ಜನತೆಯಲ್ಲಿ ಮೂಡತೊಡಗಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
‘ನಾಡು ಕಟ್ಟುವ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ನಾವೆಲ್ಲ ರಾಜಕಾರಣ ಮರೆಯೋಣ. ಜನರು ನಮಗಾಗಿ ಕಾಯುವುದಿಲ್ಲ. ಈಗಾಗಲೇ ಅವರು ಸಾಕಷ್ಟು ಕಾದಿದ್ದಾರೆ. ನಮ್ಮೆಲ್ಲರ ಜವಾಬ್ದಾರಿ ಅರಿತು ಕೆಲಸ ಮಾಡೋಣ’ ಎಂದು ಅವರು ಬಂಡಾಯವೆದ್ದಿರುವ ಸಚಿವರು, ಶಾಸಕರಿಗೆ ಕಿವಿಮಾತು ಹೇಳಿದರು.
ಯುವ ಪೀಳಿಗೆ ಮೇಲೆ ಜವಾಬ್ದಾರಿ: ನಾಡು ಕಟ್ಟುವ ದೊಡ್ಡ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ದೇಶದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಆದರೆ ಪ್ರತಿಭಾವಂತರನ್ನು ಗುರುತಿಸುವಲ್ಲಿ ಲೋಪ ಆಗುತ್ತಿದೆ. ಅಮೆರಿಕ ಅಧ್ಯಕ್ಷರ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯರು ಅಲ್ಲಿನ ಪ್ರಗತಿಗೆ ಕಾರಣಕರ್ತರಾಗಿದ್ದಾರೆ. ಇದು ಭಾರತೀಯ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ್ರೋಹಿಗಳಿದ್ದಾರೆ ಎಚ್ಚರ: ‘ನಮ್ಮ, ನಿಮ್ಮ ಅಕ್ಕ ಪಕ್ಕದಲ್ಲಿಯೇ ದೇಶ ದ್ರೋಹಿಗಳಿರುತ್ತಾರೆ ಎಚ್ಚರ. ಈ ಸಂಬಂಧ ವಿದ್ಯಾರ್ಥಿಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಜಾಗರೂಕರಾಗಿರಬೇಕು. ದೇಶಕ್ಕಾಗಿ ದುಡಿದು ತ್ಯಾಗ ಮಾಡಿದ ಅನೇಕ ಹಿರಿಯರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ದೇಶ ಪ್ರಜ್ಞೆ ಮೂಡಿಸಬೇಕು’ ಎಂದರು.