 |
|
ಕಾಶ್ಮಿರ ಹಾಗೂ ದೇಶದ ಇತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಅನಂತ್ನಾಗ್- ಕಾಸಿಗಂದ್ ರೈಲು ಸೇವೆ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಕೇಂದ್ರ ಮರುಬಳಕೆ ಇಂಧನ ಖಾತೆ ಸಚಿವ ಫಾರೂಕ್ ಅಬ್ದುಲ್ಲಾ ಅವರು ನೆರೆದಿದ್ದ ಜನಸ್ತೋಮದತ್ತ ಕೈ ಬೀಸಿದರು.
- ಪಿಟಿಐ ಚಿತ್ರ
|
ಅನಂತನಾಗ್ (ಕಾಶ್ಮೀರ) (ಪಿಟಿಐ): ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ‘ಅರ್ಥ ಪೂರ್ಣ ವಿಚಾರ’ ಹೊಂದಿದ ಯಾರೊಂದಿಗಾದರೂ ಮಾತನಾಡಲು ಸಿದ್ಧ ಎಂದ ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರದಲ್ಲಿ ಭಯೋತ್ಪಾದನೆ ಬಿತ್ತುತ್ತಿರುವ ವರಿಗೆ ಲಗಾಮು ಹಾಕಿದರೆ ಮಾತ್ರ ಪಾಕಿಸ್ತಾನ ದೊಂದಿಗೆ ಚರ್ಚೆ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಹಿಂಸೆ ಮತ್ತು ಭಯೋತ್ಪಾದನೆಯು ಕಾಲ ಮುಗಿದಿದೆ ಎಂದು ಇಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ ಅವರು, ರಾಜ್ಯದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಇದೇ ವೇಳೆ ಕೇಂದ್ರದ ನೆರವು ಪ್ರಕಟಿಸಿದರು.
ಜಮ್ಮು ಕಾಶ್ಮೀರದ ರಾಜಕೀಯ ಮ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಎಲ್ಲಾ ವರ್ಗಗಳ ಜನರನ್ನೂ ಭಾಗಿಯಾಗಿಸಬೇಕು ಎಂದರು.
ಸಭೆಯ ನಂತರ, 18 ಕಿ.ಮೀ. ಅಂತರದಲ್ಲಿರುವ ಅನಂತ್ನಾಗ್- ಕಾಜಿಗಂದ್ ನಡುವೆ ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಅವರು, ಜಮ್ಮು ಮತ್ತು ಶ್ರೀನಗರಗಳ ನಡುವೆ ಬನಿಹಾಲ್ ಪಾಸ್ ಮೂಲಕ ರೈಲು ಸಂಚರಿಸುವ ದಿನ ಕೂಡ ದೂರವಿಲ್ಲ ಎಂದು ಭರವಸೆ ನೀಡಿದರು. ಉಗ್ರರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಇದೀಗ ನಡೆಸುತ್ತಿರುವ ಕಾರ್ಯಾಚರಣೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಭಯೋತ್ಪಾದಕ ಸಂಘಟನೆಗಳನ್ನು ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಭಯೋತ್ಪಾದಕರ ಸಿದ್ಧಾಂತದ ಜತೆ ಹೊಂದಾಣಿಕೆ ಮಾಡಿಕೊಂಡು, ಅವರನ್ನು ಗುರಾಣಿಯಾಗಿ ಬಳಸಿ ಕೊಳ್ಳಬಹುದು ಎಂಬ ಯೋಚನೆಗೆ ಯಾವ ಅರ್ಥವೂ ಇಲ್ಲ. ಉಗ್ರರು ಅಂತಿಮವಾಗಿ ಆಶ್ರಯದಾತರ ವಿರುದ್ಧವೇ ತಿರುಗಿ ಬಿದ್ದು ಸಾವು ಮತ್ತು ವಿಪತ್ತಿಗೆ ಮಾತ್ರ ಕಾರಣರಾಗುತ್ತಾರೆ. ಉಗ್ರರ ನಿಜವಾದ ಮುಖವನ್ನು ಪಾಕಿಸ್ತಾನದ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಒಂದು ವೇಳೆ, ಪಾಕಿಸ್ತಾನ ಹೇಳುತ್ತಿರುವಂತೆ, ಅಲ್ಲಿರುವ ಉಗ್ರರು ‘ರಾಷ್ಟ್ರರಹಿತ’ರೇ ಆಗಿದ್ದರೆ, ಅವರನ್ನು ಬಂಧಿಸಿ, ಅವರ ಶಿಬಿರಗಳನ್ನು ನಾಶ ಮಾಡುವುದು ಅಲ್ಲಿನ ಸರ್ಕಾರದ ಗುರಿಯಾಗಬೇಕು ಎಂದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ, ಮುಖ್ಯ ಮಂತ್ರಿ ಒಮರ್ ಅಬ್ದುಲ್ಲಾ, ಕೇಂದ್ರ ಸಚಿವರಾದ ಫಾರೂಕ್ ಅಬ್ದುಲ್ಲಾ, ಗುಲಾಂ ನಬಿ ಆಜಾದ್, ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ವೇದಿಕೆಯಲ್ಲಿದ್ದರು.