|
ಬಿಗಿಭದ್ರತೆಯಲ್ಲಿ
ಹಿಲರಿ ಭೇಟಿ
ಲಾಹೋರ್ (ಪಿಟಿಐ): ಹಿಲರಿ ಕ್ಲಿಂಟನ್ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರಮುಖ ರಸ್ತೆಗಳು ಹಾಗೂ ಕೆಲವು ಸ್ಥಳಗಳನ್ನು ಸಾರ್ವಜನಿಕರಿಂದ ಮುಕ್ತವಾಗಿಡಲಾಗಿತ್ತು.
ಹಿಲರಿ ಅವರು ಬಂದಿಳಿದ ವಿಮಾನನಿಲ್ದಾಣಕ್ಕೆ ಎಲ್ಲರ ಪ್ರವೇಶವನ್ನು ನಿರ್ಬಂಧ ಗೊಳಿಸಲಾಗಿತ್ತು. ಹಿಲರಿ ಭೇಟಿಯ ವರದಿ ಮಾಡಬೇಕಾಗಿದ್ದ ಮಾಧ್ಯಮದವರಿಗೂ ಇಲ್ಲಿ ಪ್ರವೇಶ ನಿರಾಕರಿಸಲಾಗಿತ್ತು.
|
ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರ ಮತ್ತು ನೀರು ಹಂಚಿಕೆ ವಿಷಯಕ್ಕೆ ಸಂಬಂ ಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಪಾಕ್ ಕೋರಿಕೆಯನ್ನು ಅಮೆರಿಕ ತಳ್ಳಿಹಾಕಿದೆ. ಆದರೆ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ಆರಂಭಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಅಭಯ ನೀಡಿದೆ.
ದಕ್ಷಿಣ ಏಷ್ಯಾದಲ್ಲಿ ಶಕ್ತಿ ಸಮತೋಲನ ಕಾಪಾಡಿಕೊಳ್ಳಲು ಭಾರತದ ಜತೆಗೆ ಮಾತುಕತೆ ಪುನರಾರಂಭಕ್ಕೆ ಸಹಕರಿಸುವಂತೆ ಪಾಕ್ ಪ್ರಧಾನಿ ಯೂಸೂಫ್ ರಜಾ ಗಿಲಾನಿ ಮಾಡಿಕೊಂಡ ಮನವಿಗೆ ಅಮೆರಿಕ ಈ ಪ್ರತಿಕ್ರಿಯೆ ನೀಡಿದೆ.
ಗುರುವಾರ ಇಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರೊಂದಿಗಿನ ಮಾತುಕತೆ ವೇಳೆ ಗಿಲಾನಿ ಈ ಪ್ರಸ್ತಾವವನ್ನು ಮುಂದಿಟ್ಟರು.
ಕಾಶ್ಮೀರ ಮತ್ತು ನೀರು ಹಂಚಿಕೆಯ ವಿಷಯಗಳಿಗೆ ಸಂಬಂಧಿಸಿ ದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಬೇಕು. ಇದರಿಂದ ಪಾಕಿಸ್ತಾನ ಭಾರತದೊಂದಿಗೆ ಶಕ್ತಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ಗಿಲಾನಿ ಮಾತುಕತೆ ವೇಳೆ ತಿಳಿಸಿದರು. ಆದರೆ ‘ದ್ವಿಪಕ್ಷೀಯ ಮಾತುಗಳಿಂದಷ್ಟೇ ಪ್ರಮುಖ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು’ ಎಂಬ ನಿಲುವನ್ನು ಹಿಲರಿ ವ್ಯಕ್ತಪಡಿಸಿದರು.
‘ಇದು ಕಷ್ಟದಾಯಕ ಪ್ರಕ್ರಿಯೆಯಾಗಿದ್ದು, ಭಾರತ ಮತ್ತು ಪಾಕ್ ನಡುವೆ ಶೀಘ್ರ ದ್ವಿಪಕ್ಷೀಯ ಮಾತುಕತೆ ಆರಂಭಕ್ಕೆ ಪ್ರಯತ್ನಿಸುವುದಾಗಿ’ ಹಿಲರಿ ತಿಳಿಸಿದರು.
ಮುಂಬೈ ಮೇಲಿನ ದಾಳಿಯ ಆರೋಪಿಗಳನ್ನು ಒಪ್ಪಿಸದ ಹೊರತು ಪಾಕ್ನೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂಬ ನಿಲುವನ್ನು ಭಾರತ ತಾಳಿರುವುದರಿಂದ ಎರಡು ದೇಶಗಳ ನಡುವೆ ಮಾತುಕತೆ ನಿಂತು ಹೋಗಿದೆ.
ಪ್ರಾದೇಶಿಕ ವ್ಯಾಪಾರದ ಲಾಭ: ಪ್ರಾದೇಶಿಕ ವ್ಯಾಪಾರದಿಂದ ಗಳಿಸಬಹುದಾದ ಲಾಭದ ಉದ್ದೇಶದಿಂದಲಾದರೂ ಭಾರತ ಮತ್ತು ಪಾಕಿಸ್ತಾನ ತಮ್ಮ ನಡುವೆ ಇರುವ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹಿಲರಿ ಕ್ಲಿಂಟನ್ ಸಲಹೆ ನೀಡಿದ್ದಾರೆ.