ಬೆಂಗಳೂರು: ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ರಾಜಕೀಯದಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಇಂದಿನವರೆಗೂ ಅವರಿಗೆ ಸರಿಯಾದ ಪ್ರಾತಿನಿಧ್ಯ ಸಿಗದೇ ಇರುವುದು ವಿಷಾದನೀಯ ಎಂದು ರಾಜ್ಯ ಸಭಾ ಸದಸ್ಯೆ ಬೃಂದಾ ಕಾರಟ್ ಹೇಳಿದರು.
ಬುಧವಾರ ಸುರಾನಾ ಕಾಲೇಜಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ‘ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ’ ಕುರಿತು ಅವರು ಮಾತನಾಡಿದರು.
ಪಾಕಿಸ್ತಾನ (ಶೇ 22), ಅಪಘಾನಿಸ್ತಾನ (ಶೇ 27), ಬಾಂಗ್ಲಾ (ಶೇ 13)ದಂತಹ ನೆರೆಯ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶದ ಮಹಿಳೆಯರು (ಶೇ 11) ರಾಜಕೀಯವಾಗಿ ಬಹಳ ಹಿಂದೆ ಉಳಿದಿದ್ದಾರೆ. ಸಂಸತ್ತು ಇನ್ನೂ ಪುರುಷರ ರಾಜ್ಯವಾಗಿಯೇ ಉಳಿದಿದೆ. ರಾಜಕೀಯವನ್ನು ಮುನ್ನಡೆಸುವ ಪ್ರತಿಭೆ ಇದ್ದಾಗ್ಯೂ ಭಾರತದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಬೇರೆ ಕ್ಷೇತ್ರಗಳಲ್ಲಿ ಪುರುಷರನ್ನು ಹಿಂದೆ ಹಾಕಿದರೂ ಈ ಕ್ಷೇತ್ರದಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಬೃಂದಾ ಅಭಿಪ್ರಾಯಪಟ್ಟರು.
ಯಾವುದೇ ರಾಜಕೀಯ ಪಕ್ಷಗಳು ಟಿಕೆಟ್ ನೀಡುವಾಗ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳೆಯರ ರಾಜಕೀಯ ಭವಿಷ್ಯವನ್ನು ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚೆಂದರೆ ತಾಲ್ಲೂಕು ಪಂಚಾಯ್ತಿಗಳಿಗೆ ಸೀಮಿತಗೊಳಿಸಲಾಗುತ್ತದೆ. ಆದರೆ ಎಲ್ಲ ಮಟ್ಟದಲ್ಲಿಯೂ ನಮಗೆ ನಮ್ಮ ಪಾಲು ಬೇಕು. ನಾವು ಬಿಕ್ಷೆ ಕೇಳುತ್ತಿಲ್ಲ, ಸಮಾನತೆಯ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮೀಸಲಾತಿ ಮಸೂದೆ ಜಾರಿಯಾದರೆ ಮಹಿಳೆಯರ ಎಲ್ಲ ಸಮಸ್ಯೆಗಳೂ ಮುಕ್ತಿ ಕಾಣುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಸಮಸ್ಯೆಗಳಿಗೂ ಇದೊಂದೇ ಪರಹಾರ ಮಾರ್ಗವಲ್ಲ ಎಂದರು. ಒಂದು ಗುಂಪಿನ ಒಂದು ಸಮಸ್ಯೆಗೆ ಹಾಗೂ ಅದರ ಸುತ್ತ ಇರುವ ವಲಯಕ್ಕೆ ಇದರಿಂದ ಅನುಕೂಲವಾಗುತ್ತದೆ. ಬೇರೆ ಬೇರೆ ಸಮಸ್ಯೆಗಳಿಗೆ ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳಬೇಕಾಗುತ್ತದೆ ಎಂದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಜ್ಞಾಪೂರ್ವಕವಾಗಿ ಹಾಗೂ ಚಾಣಾಕ್ಷತನದಿಂದ ತಡೆಹಿಡಿಯಲಾಗಿದೆ ಎಂದರು. ಪ್ರತಿಭಾ ಪಟೇಲ್ ಅವರು ರಾಷ್ಟ್ರಾಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಮಹಿಳಾ ಮೀಸಲಾತಿ ಮಸೂದೆಗೆ ಭರದ ಚಾಲನೆ ಸಿಗುತ್ತದೆ ಎಂದು ಕಟ್ಟಿಕೊಂಡ ಕನಸೂ ನನಸಾಗಲಿಲ್ಲ ಎಂದು ಅವರು ತಿಳಿಸಿದರು.
ಕಾಲೇಜು ಪ್ರಾಚಾರ್ಯ ಎ.ಎಸ್.ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಕೆ.ಎಸ್.ಶಾರದಾ, ಕಾರ್ಯದರ್ಶಿ ಗೌರಮ್ಮ, ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಯೋಜನಾಧಿಕಾರಿ ಬಾಲಾಜಿ ನಾಯಕ್ ಇತರರಿದ್ದರು.