ಬೆಂಗಳೂರು: ‘ವೃತ್ತಿಪರರಿಗೆ ನಿವೃತ್ತಿ ಎಂಬುದಿಲ್ಲ. ಅವರು ತಮ್ಮ ಅಪಾರ ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಲು ಮುಂದಾಗಬೇಕು’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕರೆ ನೀಡಿದರು.
ನಗರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಭಾರತೀಯ ಎಂಜಿನಿಯರ್ಸ್ ಸಂಸ್ಥೆಯ ಅಮೃತ ಮಹೋತ್ಸವ ಸಮಾರಂಭಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಎಂಜಿನಿಯರ್ ವೃತ್ತಿ ಶ್ರೇಷ್ಠವಾದುದು. ಅವರು ರಾಷ್ಟ್ರ ನಿರ್ಮಾಣಕಾರರಿದ್ದಂತೆ. ಜನರು ಉತ್ತಮವಾಗಿ ಜೀವನ ನಡೆಸಲು ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ’ ಎಂದರು.
‘ರಾಜ್ಯದಲ್ಲೂ ಸಾಕಷ್ಟು ಮಂದಿ ಪರಿಣತ ಎಂಜಿನಿಯರ್ಗಳಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಅವರಿಗೆ ಗೌರವವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರಮುಖ ಕಾಮಗಾರಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುತ್ತಿಗೆದಾರ ಸಂಸ್ಥೆಗಳು ಭಾಗವಹಿಸುತ್ತಿವೆ. ಹಾಗಾಗಿ ಸ್ಥಳೀಯ ಎಂಜಿನಿಯರ್ಗಳು ಆ ಗುಣಮಟ್ಟ ಹಾಗೂ ಪರಿಪಕ್ವತೆ ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ವೃತ್ತಿಪರತೆಗೆ ಯಾವಾಗಲೂ ಸ್ವಾಯತ್ತತೆ ನೀಡಬೇಕು. ಸಮರ್ಪಕ ಜ್ಞಾನ ಸಂಪಾದಿಸಿರುವ ವೃತ್ತಿಪರರು ತಮ್ಮ ಕಾರ್ಯ ನಿರ್ವಹಣೆ ವೇಳೆ ಸೂಕ್ತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡಬೇಕು. ಆಗ ಅವರ ಜ್ಞಾನದ ಪೂರ್ಣ ಉಪಯೋಗ ಪಡೆಯಬಹುದಾಗಿದೆ’ ಎಂದರು.
‘ಭಾರತದ ನಾಗರಿಕತೆ ಬೆಳವಣಿಗೆಗೆ ರಾಜ್ಯದ ಕೊಡುಗೆ ಅಪಾರವಾಗಿದೆ. ದಕ್ಷಿಣ ಭಾಗವು ಸಾಕಷ್ಟು ತಜ್ಞರನ್ನು ಒಳಗೊಂಡಿದೆ. ಅದರಲ್ಲೂ ಕರ್ನಾಟಕ ಈ ಪೈಕಿ ಮೊದಲ ಸ್ಥಾನದಲ್ಲಿದೆ. ಇದೇ ಸ್ಥಾನವನ್ನು ಕಾಯ್ದುಕೊಳ್ಳಬೇಕಾದ ಹೊಣೆ ಎಲ್ಲರ ಮೇಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಪ್ರಫುಲತಾ ಭಾರದ್ವಾಜ್ ಅವರು ಅಮೃತ ಮಹೋತ್ಸವದ ಲಾಂಛನ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕರ್ನಾಟಕ ಕೇಂದ್ರದ ಅಧ್ಯಕ್ಷ ಡಾ.ಎಲ್.ವಿ. ಮುರಳಿಕೃಷ್ಣರೆಡ್ಡಿ, ಗೌರವ ಕಾರ್ಯದರ್ಶಿ ಡಾ.ಎಸ್.ಬಿ. ಗಂಜಿಗಟ್ಟಿ, ಮಾಜಿ ಅಧ್ಯಕ್ಷರಾದ ಡಾ.ಎಚ್.ಸಿ. ವಿಶ್ವೇಶ್ವರಾಯ, ಡಾ.ಎಂ.ಪಿ. ಚೌಡಯ್ಯ ಇತರರು ಉಪಸ್ಥಿತರಿದ್ದರು.
‘ಶಾಂತಿ ಸಹಬಾಳ್ವೆ ಮುಖ್ಯ’
‘ಇದು ನಮ್ಮ ಸರ್ಕಾರ. ನಾನು ಕೂಡ ಸರ್ಕಾರದ ಭಾಗವಾಗಿದ್ದು, ಸರ್ಕಾರವು ಜನತೆಗೆ ಉತ್ತಮ ಸೌಲಭ್ಯ ಕಲ್ಪಿಸಲಿ ಎಂಬ ಉದ್ದೇಶದಿಂದ ನಾನು ಹೇಳಿಕೆ ನೀಡಿದ್ದೆೆ’ ಎಂದು ರಾಜ್ಯಪಾಲ ಭಾರದ್ವಾಜ್ ಹೇಳಿದರು.
ರಾಜ್ಯದಲ್ಲಿನ ಕಾನೂನು-ಸುವ್ಯವಸ್ಥೆ ಕುರಿತು ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸರ್ಕಾರ ಜನತೆಗೆ ಉತ್ತಮ ಸೌಲಭ್ಯಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜನತೆ ಶಾಂತಿ- ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂಬುದು ನನ್ನ ಆಶಯ. ಆ ಕಳಕಳಿಯಿಂದ ಹೇಳಿಕೆ ನೀಡಿದೆ’ ಎಂದು ಸಮರ್ಥಿಸಿಕೊಂಡರು.
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಶಾಂತಿ- ಸುವ್ಯವಸ್ಥೆ ನೆಲೆಸಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಈಗಲೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಹಿಂದೆ ನೀಡಿದ್ದ ಹೇಳಿಕೆಯ ಒಂದು ಅಂಶವನ್ನಷ್ಟೇ ಮಾಧ್ಯಮಗಳಿಗೆ ಹೆಚ್ಚು ಒತ್ತು ನೀಡಿವೆ’ ಎಂದರು.