ನವದೆಹಲಿ(ಪಿಟಿಐ):ಶಾರ್ಟ್ ಸರ್ಕೀಟ್ ಸಂಭವಿಸಿದೆ ಎಂಬ ವದಂತಿಯಿಂದ ಇಲ್ಲಿನ ಖಜೂರಿ ಖಾಸ್ನಲ್ಲಿ ಸರ್ಕಾರಿ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಕಾಲ್ತುಳಿದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬದವರ ಆಸ್ಪತ್ರೆಯ ಎದುರು ರೋದಿಸುತ್ತಿದ್ದ ಸನ್ನಿವೇಶ ಕರುಳು ಕಿವಿಚುವಂತಿತ್ತು.
‘ಇದು ರಂಜಾನ್ ಮಾಸದ ತಿಂಗಳು. ಆಕೆ ಉಪವಾಸ ವ್ರತದಲ್ಲಿದ್ದಳು. ಬೆಳಿಗ್ಗೆ ಏನೂ ತಿನ್ನದೇ ಶಾಲೆಗೆ ಬಂದಿದ್ದಳು. ಈಗ ಅಧಿಕಾರಿಗಳು ಆಕೆ ಸತ್ತಿದ್ದಾಳೆ ಎನ್ನುತ್ತಾರೆ’ ಎಂದು ಮೃತಪಟ್ಟ ವಿದ್ಯಾರ್ಥಿನಿ ಆಫ್ರೋಜ್ಳ ತಾಯಿ ಶಂಷಾರಿ ಗೋಳಿಟ್ಟರು.
ಶಂಷಾರಿಯಂತೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಇಲ್ಲವೇ ಗಾಯಗೊಂಡ ಮಕ್ಕಳ ತಂದೆ-ತಾಯಂದಿರು, ನೂರಾರು ಮಂದಿ ಬಂಧು ಬಳಗದವರು ಆಸ್ಪತ್ರೆ ಎದುರು ಜಮಾಯಿಸಿ, ತಮ್ಮ ನೋವುಗಳನ್ನು ತೋಡಿಕೊಳ್ಳುತ್ತಿದ್ದರು. ಆಸ್ಪತ್ರೆಯೊಳಗೆ ತಮ್ಮನ್ನು ಕಳುಹಿಸುವಂತೆ ಅಂಗಲಾಚುತ್ತಿದ್ದರು. ‘ನಮ್ಮನ್ನು ಅಧಿಕಾರಿಗಳು ಕತ್ತಲಲ್ಲಿಟ್ಟಿದ್ದಾರೆ. ಆಸ್ಪತ್ರೆಯೊಳಗೆ ನನ್ನ ಮಗಳ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುತ್ತಿಲ್ಲ. ಕೆಲವರು ಅವಳ ಬಲಗಾಲು ಮುರಿದಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಆರೋಪಿಸುತ್ತಿದ್ದಾರೆ.
ಮುಖ್ಯಮಂತ್ರಿ ಭೇಟಿ: ಸುದ್ದಿ ತಿಳಿದ ನಂತರ ಆಸ್ಪತ್ರೆಗೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ‘ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ದೀಕ್ಷಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಮಕ್ಕಳ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ, ತೀವ್ರವಾಗಿ ಗಾಯಗೊಂಡ ಮಕ್ಕಳ ಪ್ರತಿ ಕುಟುಂಬಕ್ಕೆ 50 ಸಾವಿರ ರೂ ಪರಿಹಾರವಾಗಿ ಘೋಷಿಸಲಾಗಿದೆ.
ವಿಭಿನ್ನ ಕಾರಣಗಳು ?: ಕಾಲ್ತುಳಿತಕ್ಕೆ ಶಾರ್ಟ್ಸರ್ಕ್ಯೂಟ್ ವದಂತಿ ಕಾರಣ ಎಂದು ಪೊಲೀಸರು ಹೇಳುತ್ತಿದ್ದರೆ, ವಿದ್ಯಾರ್ಥಿಗಳು, ಪೋಷಕರು ನೀಡುತ್ತಿರುವ ಕಾರಣವೇ ಬೇರೆ.
‘ನಮ್ಮ ತರಗತಿಯಲ್ಲಿ ಪರೀಕ್ಷೆ ಆರಂಭವಾಯಿತು. ಇದ್ದಕ್ಕಿದ್ದಂತೆ ಹುಡುಗರ ಗುಂಪೊಂದು ತರಗತಿಯೊಳಗೆ ನುಗ್ಗಿ ನಮ್ಮನ್ನು ಹೊರ ನೂಕಿತು. ನಾವು ಮಹಡಿ ಮೆಟ್ಟಿಲು ಇಳಿಯುತ್ತಾ ನೆಲಮಹಡಿ ತಲುಪುವ ಹೊತ್ತಿಗೆ ಕಾಲ್ತುಳಿತ ಸಂಭವಿಸಿತ್ತು’ ಎಂದು ಇದೇ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಸಂಜನಾ ಹೇಳಿದ್ದಾರೆ.
ಸಂಜಾನ ತಂದೆ ವೀರ್ಸಿಂಗ್ ಗೌತಮ್ ಪ್ರಕಾರ ‘ ಪರೀಕ್ಷಾ ಕೇಂದ್ರವನ್ನು ಬದಲಾಯಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಗದ್ದಲದಲ್ಲಿ ಈ ಘಟನೆ ನಡೆದಿದೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.