ಬೆಂಗಳೂರು: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತಂತೆ ಯಡಿಯೂರಪ್ಪ ಅವರ ಬದ್ಧತೆಯನ್ನು ಪ್ರಶ್ನಿಸಿದ ದತ್ತ, ‘ರೈತರ ಹಿತರಕ್ಷಣೆಗಾಗಿ ರೂಪಿಸಿದ್ದ ಕರಡು ಮಸೂದೆಯನ್ನು ಸಂಪುಟ ಸಭೆಯ ಮುಂದಿಡಲು ಎಲ್ಲ ತಯಾರಿ ನಡೆದಿತ್ತು. ಆದರೆ ಸರ್ಕಾರದಿಂದ ಹೊರ ನಡೆಯುವ ಬೆದರಿಕೆ ಹಾಕಿದ ಯಡಿಯೂರಪ್ಪ ಅವರು ಈ ಪ್ರಸ್ತಾವಕ್ಕೆ ಅಡ್ಡಿಯಾಗಿದ್ದರು’ ಎಂದು ಹೇಳಿದರು.
ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಮಂಡಿಸಿದ್ದ ಚೊಚ್ಚಲ ಬಜೆಟ್ಗೆ ಯಡಿಯೂರಪ್ಪ ಅವರು 1995ರ ಮಾರ್ಚ್ 25ರಂದು ವಿಧಾನಸಭೆಯಲ್ಲಿ ನೀಡಿದ್ದ ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ಓದುವ ಮೂಲಕ ದತ್ತ ಮಾತು ಆರಂಭಿಸಿದರು.
‘ನಮ್ಮ ಈಗಿನ ಮುಖ್ಯಮಂತ್ರಿಗಳು ಆಗ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿಮಾನ ನಿಲ್ದಾಣಕ್ಕೆ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಖಂಡಿಸಿದ್ದರು. ಈಗ ಅದೆಲ್ಲವನ್ನೂ ಮರೆತು ಬಳ್ಳಾರಿಯಲ್ಲಿ ನೀರಾವರಿ ಭೂಮಿಯಲ್ಲೇ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದಾರೆ. ನಮ್ಮ ಬದುಕು ಉಳಿಸಿ ಎಂಬ ರೈತರ ಕೂಗು ಅವರ ಕಿವಿಗೆ ಬೀಳುತ್ತಿಲ್ಲ’ ಎಂದು ಟೀಕಿಸಿದರು.
ವಿಧಾನಸಭೆಯ ಚರಿತ್ರೆಯ ಪುಟಗಳತ್ತ ತಿರುಗಿದ ಅವರು, 1997ರ ಆಗಸ್ಟ್ 25ರಂದು ಬಿಎಂಐಸಿ ಯೋಜನೆ ವಿರೋಧಿಸಿ ಯಡಿಯೂರಪ್ಪ ಅವರು ಆಡಿದ್ದ ಮಾತುಗಳನ್ನು ಓದಿದರು. ಈ ಯೋಜನೆಯಲ್ಲಿ ಅಂದಿನ ಸರ್ಕಾರ 10,000 ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದನ್ನು ಮುಖ್ಯಮಂತ್ರಿಗಳಿಗೆ ನೆನಪು ಮಾಡಿಕೊಟ್ಟರು.
‘ನಮ್ಮ(ಜನರ) ತಲೆ ಬೋಳಿಸಿಕೊಂಡು ಅವನನ್ನು (ಅಶೋಕ್ ಖೇಣಿ) ಕೋಟ್ಯಧಿಪತಿ ಮಾಡ್ಬೇಕಾ? ತಕ್ಷಣ ಪ್ರಸ್ತಾವವನ್ನು ರದ್ದು ಮಾಡಿ. ಸರ್ಕಾರವೇ ಯೋಜನೆಯನ್ನು ಅನುಷ್ಠಾನಕ್ಕೆ ತರಲಿ. ಜಾಗತಿಕ ಟೆಂಡರ್ ಆಹ್ವಾನಿಸಿ ಕಾಮಗಾರಿ ನಡೆಸಿ’ ಎಂದು ಯಡಿಯೂರಪ್ಪ ಅವರು ಅಂದು ಹೇಳಿದ್ದನ್ನು ಹಲವು ಬಾರಿ ಪುನರುಚ್ಚರಿಸಿದರು.
ಜನನಾಯಕ ಆಗಬಹುದಿತ್ತು:
ಇದೇ ಯೋಜನೆಯನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಂಡು ರೈತರನ್ನು ರಕ್ಷಿಸುವ ಸುವರ್ಣ ಅವಕಾಶ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊರಕಿತ್ತು. ರಾಮಾಜೋಯಿಸ್ ಅವರು ಸಿದ್ಧಪಡಿಸಿದ್ದ ಕರಡು ಮಸೂದೆಯನ್ನು ಸಂಪುಟದ ಮುಂದಿಡುವ ತಯಾರಿ ನಡೆದಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಯಡಿಯೂರಪ್ಪ ಅವರೇ ಈ ಪ್ರಸ್ತಾವವನ್ನು ವಿರೋಧಿಸಿದ್ದರು ಎಂದು ಆರೋಪಿಸಿದರು.
‘
ನೈಸ್ ಸಂಸ್ಥೆ ರಸ್ತೆ ಮತ್ತು ಉಪನಗರ ಯೋಜನೆಗಳ ಹೆಸರಿನಲ್ಲಿ ರೈತರ ಬದುಕನ್ನೇ ನಾಶ ಮಾಡುತ್ತಿದೆ. ಸರ್ಕಾರ ರೈತರ ರಕ್ಷಣೆಗೆ ಧಾವಿಸುವ ಎಲ್ಲ ಅವಕಾಶಗಳೂ ಇದ್ದವು. ಆ ಪ್ರಸ್ತಾವವನ್ನು ಬೆಂಬಲಿಸಿದ್ದರೆ ನೀವು ನಿಜವಾದ ಜನನಾಯಕ ಆಗಬಹುದಿತ್ತು’ ಎಂದು ಮುಖ್ಯಮಂತ್ರಿಗಳಿಗೆ ಹೇಳಿದರು.
ರೈತರು ಬೆಳೆದ ಕಬ್ಬಿಗೆ ಬೆಲೆ ನಿಗದಿ, ನೀರಾವರಿ ಪಂಪ್ಗಳಿಗೆ ವಿದ್ಯುತ್ ಪೂರೈಕೆ ಮತ್ತಿತರ ವಿಷಯಗಳಲ್ಲಿ ವಿರೋಧಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರು ಹೊಂದಿದ್ದ ನಿಲುವುಗಳನ್ನು ಸದನದ ಮುಂದೆ ಬಿಚ್ಚಿಟ್ಟ ಅವರು, ‘ಬದ್ಧತೆ ಕಾಲಕಾಲಕ್ಕೆ ಬದಲಾಗಬಾರದು. ಹಾಗೆ ಆದರೆ ನಾವು ಬಿಟ್ಟ ಬಾಣಗಳೇ ನಮಗೆ ತಿರುಗಿ ಚುಚ್ಚುತ್ತವೆ’ ಎಂದು ವ್ಯಂಗ್ಯ ಮಾಡಿದರು.
ಅದು ಬಿಜೆಪಿ ನಿಲುವು
ಬೆಂಗಳೂರು: ಬೆಂಗಳೂರು: ‘ನೈಸ್ ಯೋಜನೆಯನ್ನು ವಶಕ್ಕೆ ಪಡೆಯುವ ಪ್ರಸ್ತಾವವನ್ನು ವಿರೋಧಿಸುವ ನಿರ್ಧಾರ ಬಿಜೆಪಿಯದ್ದು. ಅದನ್ನು ನಾನು ಪಾಲಿಸಬೇಕಾಯಿತು. ಆದರೆ ಅಷ್ಟು ಮಾತ್ರಕ್ಕೆ ರೈತರ ವಿಷಯದಲ್ಲಿ ನನ್ನ ಬದ್ಧತೆ ಬದಲಾಗಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
‘ಕರಡು ಮಸೂದೆ ರೂಪಿಸುವ ಹಂತದಲ್ಲಿ ಯೋಜನೆ ಶೇಕಡ 90ರಷ್ಟು ಪೂರ್ಣಗೊಂಡಿತ್ತು. ಸುಪ್ರೀಂಕೋರ್ಟ್ ನಿರ್ದೇಶನವೂ ಇತ್ತು. ಅದೆಲ್ಲವನ್ನೂ ಮೀರಿ ಸಣ್ಣ ಕಾರಣಗಳಿಗೆ ಒಂದು ದೊಡ್ಡ ಯೋಜನೆಯನ್ನು ವಿರೋಧಿಸಿದರೆ ಮುಂದೆ ರಾಜ್ಯದ ಆಡಳಿತ ವ್ಯವಸ್ಥೆಯ ಬಗ್ಗೆ ಕೈಗಾರಿಕೋದ್ಯಮಗಳಲ್ಲಿ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇತ್ತು.
ಆದ್ದರಿಂದ ಮಸೂದೆಯನ್ನು ವಿರೋಧಿಸಬೇಕಾಯಿತು’ ಎಂದು ಅವರು ದತ್ತ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.
‘ಈ ಪಾಪದ ಕೂಸು (ನೈಸ್) ಯಾರದ್ದೆಂದು ಪ್ರತ್ಯೇಕವಾಗಿ ದಿನವಿಡೀ ಚರ್ಚೆ ಮಾಡಲು ನಾನು ಸಿದ್ಧ’ ಎಂದು ಮುಖ್ಯಮಂತ್ರಿಗಳು ಹೇಳಿದರು. ಅವರ ಸವಾಲನ್ನು ಸ್ವೀಕರಿಸುವುದಾಗಿ ದತ್ತ ಪ್ರತಿಕ್ರಿಯೆ ನೀಡಿದರು.