ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿಯ ವೇಗವನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೆಸ್ ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ ಎಂದು ಬೆಂಗಳೂರು ಮಹಾನಗರದ ಬಿಜೆಪಿ ಘಟಕ ದೂರಿದೆ.
ನಗರದ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ರಾಜ್ಯ ಸರ್ಕಾರ 22,000 ಕೋಟಿ ರೂಪಾಯಿಯ ವಿವಿಧ ಯೋಜನೆಗಳನ್ನು ಸಿದ್ಧಪಡಿಸಿದೆ. ಇದನ್ನು ಸಹಿಸದೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂದು ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್ ಹಾಗೂ ಜೆಜೆಪಿ ನಗರ ಘಟಕದ ವಕ್ತಾರ ಎಸ್.ಪ್ರಕಾಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಮಾಜಿ ಮೇಯರ್ಗಳಾಗಿರುವ ಕಾಂಗ್ರೆಸ್ನ ಕೆಲ ಮುಖಂಡರು ತಮ್ಮ ರಾಜಕೀಯ ಭವಿಷ್ಯ ಎಲ್ಲಿ ಮಸುಕಾಗುತ್ತದೆಯೋ ಎಂಬ ಭೀತಿಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಏಳು ವರ್ಷಗಳ ಆಡಳಿತದ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಕೇವಲ 4,185 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಒಂದೂಕಾಲು ವರ್ಷದಲ್ಲಿ ನಗರದ ಅಭಿವೃದ್ಧಿಗೆ ಮಾಡಿರುವ ಖರ್ಚು 4,000 ಕೋಟಿ ರೂಪಾಯಿ ಮೀರಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಅಧಿಕಾರವಧಿಯಲ್ಲಿ ನಡೆದ ‘ಬಾಂಡ್’ ಯೋಜನೆ ಹಗರಣ, ಉದ್ಯಾನ ಅಭಿವೃದ್ಧಿ ಹಗರಣ, ಗುರುಡಾಮಾಲ್ ಹಗರಣ, ಮಹಾರಾಜಾ ಕಾಂಪ್ಲೆಕ್ಸ್ ಹಗರಣ, ಡಾಂಬರೀಕರಣ ಹಗರಣ, ಪಾದಚಾರಿ ಮಾರ್ಗ ಅಭಿವೃದ್ಧಿ ಹಗರಣ... ಹೀಗೆ ಹಲವು ಹಗರಣಗಳ ಸರಮಾಲೆಯೇ ಇದೆ. ಇವೇ ಇವರ ಬಹುದೊಡ್ಡ ಸಾಧನೆ ಎಂದು ಅವರು ಟೀಕಿಸಿದರು.