ಇಸ್ಲಾಮಾಬಾದ್ (ಪಿಟಿಐ): ಮುಂಬೈ ಮೇಲೆ ನಡೆದ ಅಮಾನುಷ ದಾಳಿ ಸಂಬಂಧ ಭಾರತ 12 ದಿನಗಳ ಹಿಂದೆ ನೀಡಿದ ಹೊಸ ಪುರಾವೆಗಳ ಪರಿಶೀಲನೆ ಮುಗಿದಿದ್ದು, ಮುಂದಿನ ವಾರ ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಪಾಕಿಸ್ತಾನ ಸ್ಪಷ್ಟಪಡಿಸಿದೆ.
ಭಾರತದ ಗೃಹ ಸಚಿವ ಪಿ.ಚಿದಂಬರಂ ಅವರು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಾಗೂ ಮತ್ತಿತರ ರಕ್ಷಣಾ ಪ್ರಮುಖರನ್ನು ಭೇಟಿಯಾಗಿ ಮುಂಬೈ ದಾಳಿ ಆರೋಪಿಗಳೆಡೆಗೆ ಪಾಕಿಸ್ತಾನ ತಳೆದಿರುವ ಸಡಿಲ ಧೋರಣೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಮರುದಿನವೇ ಈ ಹೇಳಿಕೆ ಹೊರಬಿದ್ದಿದೆ.
ಮುಂಬೈ ದಾಳಿ ಕುರಿತು ಆಗಿರುವ ವಿಚಾರಣೆ ಪ್ರಗತಿ ಅವಲೋಕಿಸಲು ತಮ್ಮ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯ ನಂತರ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಈ ವಿಷಯ ತಿಳಿಸಿದರು.
ಈವರೆಗಿನ ತನಿಖಾ ಪ್ರಗತಿ ಕುರಿತು ಸಮಾಧಾನ ವ್ಯಕ್ತಪಡಿಸಿದ ಅವರು, ಮುಂಬೈ ದಾಳಿ ಆರೋಪಿಗಳ ವಿಚಾರಣೆಯನ್ನು ಪಾರದರ್ಶಕ ರೀತಿಯಲ್ಲಿ ಶೀಘ್ರವೇ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಾನೂನು ಖಾತೆ ರಾಜ್ಯ ಸಚಿವ ಅಫ್ಜಲ್ ಸಿಂಧು, ಫೆಡರಲ್ ತನಿಖಾ ಸಂಸ್ಥೆಯ ಮುಖ್ಯಸ್ಥ ತಾರಿಕ್ ಖೋಸಾ, ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಆಂತರಿಕ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
ಮುಂಬೈ ಮೇಲಿನ ಅಮಾನುಷ ದಾಳಿಯಲ್ಲಿ ಭಾಗಿಯಾದ ಆರೋಪದ ಮೇಲೆ ಎಲ್ಇಟಿ ಕಮಾಂಡರ್ ಜಕೀಉರ್ ರೆಹಮಾನ್ ಲಖ್ವಿ ಸೇರಿದಂತೆ ಏಳು ಉಗ್ರರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಆದರೆ, ದಾಳಿಯ ಸೂತ್ರಧಾರ ಎಂದು ಭಾರತ ಬೊಟ್ಟು ಮಾಡುತ್ತಿರುವ ಎಲ್ಇಟಿ ಸ್ಥಾಪಕ (ಹಾಲಿ ಜೆಯುಡಿ ಮುಖ್ಯಸ್ಥ) ಹಫೀಜ್ ಮಹಮ್ಮದ್ ಸಯೀದ್ ವಿರುದ್ಧ ಮಾತ್ರ ಯಾವುದೇ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಪಾಕಿಸ್ತಾನ ನಾಲ್ಕು ದಿನಗಳ ಹಿಂದಷ್ಟೇ ಸ್ಪಷ್ಟಪಡಿಸಿರುವುದನ್ನು ಇಲ್ಲಿ ನೆನೆಯಬಹುದು.