ಮಧುರೆ (ಪಿಟಿಐ): ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಬೃಂದಾ ಕಾರಟ್ ಸಹಿತ ಹತ್ತು ಮಂದಿಯನ್ನು ತಮಿಳುನಾಡು ಪೊಲೀಸರು ಶನಿವಾರ ಇಲ್ಲಿ ಬಂಧಿಸಿದರು. ದಸ್ತಗಿರಿ ಮಾಡಿದ ಕಾರಣವನ್ನು ಪೊಲೀಸರು ತಿಳಿಸಿಲ್ಲ.
ಉದವ್ಪುರಂ ಗ್ರಾಮಕ್ಕೆ ಪ್ರತಿಭಟನಾ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಸಿಪಿಎಂ ನಾಯಕಿ ಬೃಂದಾ ಕಾರಟ್, ಅಖಿಲ ಭಾರತ ಪ್ರಜಾಪ್ರಭುತ್ವವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ)ಯ ಸದಸ್ಯರಾದ ವಾಸುಕಿ, ಝಾನ್ಸಿರಾಣಿ, ತಿರುಮಲ್ಲಿ ರಾಣಿ ಮತ್ತು ಇತರ 6 ಮಂದಿಯನ್ನು ಬಂಧಿಸಲಾಗಿದೆ.
ಕಳೆದ ವರ್ಷ ಇಲ್ಲಿನ ದೇಗುಲದ ವಿವಾದದಲ್ಲಿ ಮೇಲ್ವರ್ಗ ಮತ್ತು ದಲಿತರ ನಡುವೆ ನಡೆದ ಘರ್ಷಣೆವೇಳೆ ನಡೆದ ಪೊಲೀಸ್ ಗೋಲಿಬಾರ್ನಲ್ಲಿ ದಲಿತನೊಬ್ಬ ಸಾವನ್ನ ಪ್ಪಿದ್ದನು.
ಬಂಧನ ಕಾನೂನು ಬಾಹಿರ, ನಾವೆಲ್ಲರೂ ಅಲ್ಲಿ ಖಾಸಗಿ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೆವು ಎಂದು ಬಂಧನದ ಬಳಿಕ ಕಾರಟ್ ಸುದ್ದಿ ಸಂಸ್ಥೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ತಿಳಿಸಿದರು.
ಅಲ್ಲಿ ಬಂಧಿಸಿದಾಗ ಪೊಲೀಸರನ್ನು ಕಾರಣ ಕೇಳಿದೆ, ಗ್ರಾಮದಲ್ಲಿ ಉದ್ವಿಗ್ನತೆ ಇದೆ ಎಂದರು. ತಮ್ಮನ್ನೇಕೆ ಬಂಧಿಸುವಿರಿ, ಗಲಭೆಗೆ ಕಾರಣರಾದವರನ್ನು ಬಂಧಿಸಿರಿ ಎಂದೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ದೂರುವುದಾಗಿ ಬೃಂದಾ ಕಾರಟ್ ಹೇಳಿದ್ದಾರೆ.