ಚೆನ್ನೈ (ಪಿಟಿಐ): ಚೀನಾ ಅತಿಕ್ರಮಣದಿಂದ ಒಳನುಗ್ಗುತ್ತಿದ್ದರೂ, ಪಾಕಿಸ್ತಾನವು ಕದನ ವಿರಾಮ ಒಪ್ಪಂದ ಮುರಿಯುತ್ತಿದ್ದರೂ ಕೇಂದ್ರದ ಯುಪಿಎ ಸರ್ಕಾರ ಮೈಮರೆತು ಕೂತಿದೆ. ರಾಷ್ಟ್ರೀಯ ಸುರಕ್ಷತೆ ವಿಷಯದಲ್ಲಿ ಸರ್ಕಾರ ಕಠಿಣ ನಿಲುವು ತಾಳಬೇಕು ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಗುರುವಾರ ಆಗ್ರಹಿಸಿದ್ದಾರೆ.
ಅಂತರರಾಷ್ಟ್ರೀಯ ಸಂಬಂಧವನ್ನು ಅವಲೋಕಿಸಿದರೆ ಭಾರತವು ಸರಳ ಹಾಗೂ ಸಜ್ಜನ ರಾಷ್ಟ್ರ ಎನ್ನುವ ಕಲ್ಪನೆ ನೆರೆಯ ದೇಶಗಳಲ್ಲಿದೆ. ಚೀನಾ ದೇಶವು ಕೆಲ ಭಾಗಗಳಲ್ಲಿ ಅತಿಕ್ರಮಣ ಮಾಡುತ್ತಿರುವುದರ ಬಗ್ಗೆ ಮತ್ತು ಪಾಕಿಸ್ತಾನದ ಸೈನಿಕರು ಗುಂಡಿನ ದಾಳಿ ಮಾಡುತ್ತಿರುವುದರ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದಿದ್ದಾರೆ.
ಭಾರತವೇ ಮುಂದಾಗಿ ಆ ದೇಶಗಳಿಗೆ ನಿರ್ದೋಷಿ ಹಣೆಪಟ್ಟಿ ನೀಡುವಂತಾಗಿದೆ. ಒಟ್ಟಾರೆ ಯುಪಿಎ ಆಡಳಿತ ಕಾರ್ಯವೈಖರಿ ಅಸಹ್ಯ ಹುಟ್ಟಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸರ್ಕಾರವು ಉಕ್ಕಿನ ನಿಲುವು ಪ್ರದರ್ಶಿಸಬೇಕು. ಇಲ್ಲವಾದರೆ ಎಲ್ಲರೂ ಹೊಡೆಯುವ ಚೆಂಡಿನಂತಾಗುತ್ತದೆ. ಅವಕಾಶ ದೊರೆತ ಪ್ರತಿ ರಾಷ್ಟ್ರವು ಹೊಡೆತ ನೀಡಲು ಮುಂದಾಗುತ್ತವೆ’ ಎಂದು ಖಾರವಾಗಿ ನುಡಿದಿದ್ದಾರೆ.
ವಿಶೇಷ ಅಧಿವೇಶನಕ್ಕೆ ಸಮಾಜವಾದಿ ಪಕ್ಷ ಆಗ್ರಹ: ಚೀನಾ ಸೈನಿಕರು ಭಾರತೀಯ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿರುವುದನ್ನು ಚರ್ಚಿಸಲು ಸರ್ಕಾರ ವಿಶೇಷ ಅಧಿವೇಶನ ನಡೆಸಬೇಕೆಂದು ಸಮಾಜವಾದಿ ಪಕ್ಷ ಗುರುವಾರ ಆಗ್ರಹಿಸಿದೆ.
‘ಚೀನಾ ಅತಿಕ್ರಮಣವನ್ನು ಬಗ್ಗುಬಡಿಯಲು ಸರ್ಕಾರ ಏನು ಯೋಜನೆ ರೂಪಿಸಿದೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ’ ಎಂದು ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಸುದ್ದಿಗಾರರಿಗೆ ವಿವರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಪ್ರತಿ ಬಾರಿಯು ಭಾರತ-ಚೀನಾ ಗಡಿ ಕುಗ್ಗುತ್ತಲೇ ಬರುತ್ತಿದೆ. ದೇಶದ ಗಡಿ ರಕ್ಷಣೆಗೆ ಯುಪಿಎ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.
1962ರಲ್ಲಿ ಚೀನಾ ದೇಶವು ಭಾರತಕ್ಕೆ ಸೇರಿದ ಒಂದು ಲಕ್ಷ ಚದರ ಕಿಲೋ ಮೀಟರ್ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಈ ಬಗ್ಗೆ ಭಾರತ ಯಾವುದೇ ತಕರಾರು ಎತ್ತಿಲ್ಲ ಎಂದು ಈ ಹಿಂದಿನ ರಕ್ಷಣಾ ಸಚಿವರು ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಚೀನಾ ಸರಕು ಬಹಿಷ್ಕರಿಸಿ: ಚೀನಾ ದೇಶವು ‘ಗಡಿ ನಿಯಂತ್ರಣ ರೇಖೆ’ (ಎಲ್ಎಸಿ) ಭೇದಿಸಿ ಅತಿಕ್ರಮಣ ಮಾಡುವ ಪ್ರತಿಕ್ರಿಯೆ ನಿರಂತರ ನಡೆಸಿದೆ. ಈ ಹಿನ್ನೆಲೆಯಲ್ಲಿ ವೈಷಮ್ಯ ಹುಟ್ಟಿಸುವ ಆ ದೇಶದ ದೃಷ್ಟಿಕೋನ ವಿರೋಧಿಸಲು ಚೀನಾ ಸರಕುಗಳ ಖರೀದಿಯನ್ನು ಭಾರತದ ಜನರು ಬಹಿಷ್ಕರಿಸಬೇಕೆಂದು ವಿಶ್ವ ಹಿಂದು ಪರಿಷತ್ (ವಿಎಚ್ಪಿ) ಕರೆ ನೀಡಿದೆ.
ದ್ವಿ ಪಕ್ಷೀಯ ಮಾತುಕತೆ ನಿಲ್ಲಿಸಿ: ಚೀನಾ ಅತಿಕ್ರಮಣ ನೀತಿ ಒಳ್ಳೆಯದಲ್ಲ. ಎರಡು ದೇಶಗಳ ನಡುವೆ ಸಂಬಂಧ ವೃದ್ಧಿಸಲು ಭಾರತ ಇಚ್ಛಿಸಿದೆ. ಆದರೆ, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಆ ದೇಶದೊಂದಿಗಿನ ಮಾತುಕತೆ ನಿಲ್ಲಿಸಬೇಕು ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಕಠಿಣ ಕ್ರಮ ಕೈಗೊಳ್ಳಿ: ಚೀನಾ ಅತಿಕ್ರಮಣಕ್ಕೆ ಅರುಣಾಚಲಪ್ರದೇಶದ ಮುಖ್ಯಮಂತ್ರಿಯೊಬ್ಬರು ಇದೇ ಮೊದಲ ಬಾರಿ ಅಪವಾದದ ಹೇಳಿಕೆ ನೀಡಿದ್ದು, ‘ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವಾಗಿದ್ದು, ಅತಿಕ್ರಮಣದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ದೊರ್ಜಿ ಖಾಂಡು ಹೇಳಿದ್ದಾರೆ.