|
ಜೆರುಸಲೇಂ (ಪಿಟಿಐ): ಕಳೆದ ವರ್ಷ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯು ಮತ್ತೊಮ್ಮೆ ಭಾರತದ ವಿವಿಧೆಡೆ ಅದರಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಯೋಜನೆರೂಪಿಸಿದೆ ಎಂದು ಇಸ್ರೇಲ್ ಎಚ್ಚರಿಸಿದೆ.
ದಾಳಿ ನಡೆಸಲು ಎಲ್ಇಟಿ ಸಂಚು ರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಇರುವುದರಿಂದ ಭಾರತದಲ್ಲಿ ಪ್ರವಾಸದಲ್ಲಿರುವ ಇಸ್ರೇಲಿ ಪ್ರಜೆಗಳು ಕಟ್ಟೆಚ್ಚರದಿಂದ ಇರಬೇಕು ಎಂದು ಇಸ್ರೇಲ್ ಭಯೋತ್ಪಾದನಾ ತಡೆ ಸಂಸ್ಥೆಯು ಎಚ್ಚರಿಕೆ ನೀಡಿದೆ.
ಈ ಭಯೋತ್ಪಾದಕ ಸಂಘಟನೆ ಗುರಿ ಇಸ್ರೇಲ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರವಾಸಿಗರು ಆಗಿರುವುದರಿಂದ ಅವರೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ. ಜನನಿಬಿಡ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಬೇಡ ಎಂದು ಭಾರತದಲ್ಲಿರುವ ಇಸ್ರೇಲ್ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.
ಯಹೂದಿಗಳ ಹೊಸ ವರ್ಷ ಆಚರಣೆ ಅಂಗವಾಗಿ ರೋಶ್ ಹಶನಾ ಕಾರ್ಯಕ್ರಮವನ್ನು ಯಹೂದಿಗಳ ಚಬಾದ್ ಗೃಹಗಳಲ್ಲಿ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಇಸ್ರೇಲ್ ಭದ್ರತಾ ಸಂಸ್ಥೆಗಳು ಈ ವಿಚಾರವನ್ನು ತುಂಬಾ ಗಂಭೀರವಾಗಿ ಪರಿಗಣಿಸಿವೆ. ಕಳೆದ ವರ್ಷ ಮುಂಬೈ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಚಬಾದ್ ಗೃಹದ ಮೇಲೆ ಎರಗಿ ಆರು ಮಂದಿ ಇಸ್ರೇಲ್ ಪ್ರಜೆಗಳನ್ನು ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
|