ಮೈಸೂರು: ಸೂರ್ಯ ಎಂದಿನಂತೆ ಭಾನುವಾರವೂ ಸಹ ಚಾಮುಂಡಿ ಬೆಟ್ಟದ ತುದಿಯಿಂದ ಆಕಳಿಸಿಕೊಂಡು ಎದ್ದು, ಅರಮನೆ ಕಡೆಗೆ ದೃಷ್ಟಿ ಹಾಯಿಸಿದ ತಕ್ಷಣ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ. ಅಬಾಲವೃದ್ಧರಾಗಿ ಮುನ್ನೂರಕ್ಕೂ ಅಧಿಕ ಜನ ಏಕಕಾಲಕ್ಕೆ ತನಗೆ ನಮಸ್ಕಾರ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತನಾದ!.
ನಾಡಹಬ್ಬ ದಸರೆಯ ಅಂಗವಾಗಿ ಮೈಸೂರಿನ ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ಯೋಗ ದಸರಾ ಉದ್ಘಾಟನೆಯ ಸಮಯದಲ್ಲಿ ನೂರಾರು ಜನರು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ‘ಯೋಗ ಮಾಡಿ ಆರೋಗ್ಯವಾಗಿರಿ’ ಎನ್ನುವ ಸಂದೇಶವನ್ನು ದಸರೆಗೆ ಬಂದ ಜನತೆಗೆ ನೀಡಿದರು.
ಸಾಮೂಹಿಕ ಸೂರ್ಯ ನಮಸ್ಕಾರ ಮುಗಿದ ನಂತರ ಏಳೆಂಟು ಮಂದಿ ಯೋಗ ವಿದ್ಯಾರ್ಥಿಗಳು ವೇದಿಕೆಯ ಮೇಲೆ ಕ್ರಿಯಾಯೋಗ, ಗಂಡಭೇರುಂಡಾಸನ, ಕೌಂಡಿನ್ಯ ಆಸನ, ವೃಶ್ಚಿಕ ಆಸನ, ಕುಕ್ಕಟ ಆಸನ, ಚಕ್ರಾ ಸಾನ ಮುಂತಾದ ಆಸನಗಳನ್ನು ಮಾಡಿ ಯೋಗ ದಸರಾಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.