ಉತ್ತರ: ನಿಮ್ಮದು ಕರ್ಕಾಟಕ ಲಗ್ನ, ಅಶ್ವಿನಿ ನಕ್ಷತ್ರ ಮೇಷರಾಶಿ. ನಿಮ್ಮ ಲಗ್ನಾಧಿಪತಿ ಚಂದ್ರರು ಯೋಗಿಯಾಗಿ ದಶಮದಲ್ಲಿ ವೈರಿ ಶುಕ್ರರೊಡನೆ ಸ್ಥಿತರಿದ್ದಾರೆ. ಇವರನ್ನು ಪಾಪಿ ಕೇತು ಮತ್ತು ವಕ್ರೀ, ಉಚ್ಛಶನಿ ಚಥುರ್ತದಿಂದ ವೀಕ್ಷಿಸುತ್ತಾರೆ.
ನಿಮ್ಮ ವಿದ್ಯಾ ಸೂಚಕ ಚಥುರ್ತವು ತುಲಾ ರಾಶಿಯಾಗಿದ್ದು ರಾಶ್ಯಾಧಿಪತಿ ಶುಕ್ರರು ಸ್ವನಕ್ಷತ್ರದಲ್ಲಿ ದಶಮದಲ್ಲಿ ಯೋಗಿ, ಚಂದ್ರರೊಡನೆ ಸ್ಥಿತರಿದ್ದು ಚಥುರ್ತವನ್ನು ವೀಕ್ಷಿಸುತ್ತಾರೆ. ಚಥುರ್ತದಲ್ಲಿ ಅಷ್ಟಮಾಧಿಪತಿ, ಉಚ್ಛ, ವಕ್ರೀ ಶನಿ ಸ್ಥಿತರಿದ್ದು, ಪಾಪಿ ಕೇತುವಿಂದ ಪೀಡಿತರಾಗಿದ್ದಾರೆ. ಬೇರಾವ ಶುಭಸಂಬಂಧವೂ ಇಲ್ಲ. ಇದರಿಂದ ಚಥುರ್ತವು ಪೀಡಿತವಾಗಿದ್ದು ನಿಮ್ಮ ಡಿಗ್ರಿ ಮಾಡುವ ಕನಸಿಗೆ ಭಗ್ನ ಉಂಟಾಗುತ್ತಿದೆ.
ನಿಮ್ಮ ಉನ್ನತ ವಿದ್ಯಾ ಮತ್ತು ಬುದ್ಧಿ ಸೂಚಕ ಪಂಚಮವು ವೃಶ್ಚಿಕರಾಶಿಯಾಗಿದ್ದು ರಾಶ್ಯಾಧಿಪತಿ ಕುಜರು ವ್ಯಯದಲ್ಲಿ ಶತ್ರು ಕ್ಷೇತ್ರದಲ್ಲಿ ಪರಮ ವೈರಿ ಬುಧರೊಡನೆ, ಪಾಪಿ ರಾಹು ನಕ್ಷತ್ರ ಸ್ಥಿತರಿದ್ದಾರೆ. ಪಂಚಮವನ್ನು ಧನಾಧಿಪತಿ ರವಿ ಕುಜನಕ್ಷತ್ರ ಸ್ಥಿತರಾಗಿ, ವ್ಯಯಸ್ಥಾನದಿಂದ ವೀಕ್ಷಿಸುತ್ತಾರೆ. ಇವು ನಿಮಗೆ ಉನ್ನತ ವಿದ್ಯಾಭಾಗ್ಯ ಸೂಚಿಸುವುದಿಲ್ಲ. ನಿಮ್ಮ ಉದ್ಯೋಗ ಸೂಚಕ ದಶಮವು ಮೇಷರಾಶಿಯಾಗಿದ್ದು, ದಶಮಾಧಿಪತಿ ಕುಜರು ವ್ಯಯದಲ್ಲಿ ಶತ್ರು ಕ್ಷೇತ್ರದಲ್ಲಿ ಪರಮ ವೈರಿ, ಅವಯೋಗಿ ಬುಧರೊಡನೆ ಸ್ಥಿತರಿದ್ದಾರೆ. ದಶಮವು ಮೇಷ ರಾಶಿಯಾಗಿರುವುದರಿಂದ ನೀವು ಪೂರ್ವದ ಕಡೆಯ ಉತ್ತರ ಕರ್ನಾಟದ ಜಿಲ್ಲೆಗಳಲ್ಲಿ ಸಿ.ಇ.ಟಿ ಮಾಡುವುದು ಒಳಿತು.
ನಿಮ್ಮ ಉದ್ಯೋಗ ಸೂಚಕ ದಶಾಂಶ ಕುಂಡಲಿಯ ಲಗ್ನವು ಮಿಥುನವಾಗಿದ್ದು ಲಗ್ನಾಧಿಪತಿ ಬುಧರು ತೃತೀಯದಲ್ಲಿ ವ್ಯಯಾಧಿಪತಿ ಶುಕ್ರರೊಡನೆ ಸ್ಥಿತರಿದ್ದಾರೆ. ಲಗ್ನದಲ್ಲಿ ಪಾಪಿ ಕೇತು ಸ್ಥಿತರಿದ್ದು, ಸರಕಾರಿ ಉದ್ಯೋಗ ಕಾರಕ ರವಿ ನೀಚರಾಗಿ ಪಂಚಮ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಸ್ಥಾನ ಸ್ಥಿತರಿರುವುದರಿಂದ ನೀವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುವುದು ಉತ್ತಮ. ಡಿಸೆಂಬರ 2009ರ ನಂತರ ನಿಮಗೆ ಉದ್ಯೋಗ ಸಿಗುವ ಅವಕಾಶ ಹೆಚ್ಚಿಗೆ ಬರಲಿದೆ.
ಪರಿಹಾರ: ನೀವು ಕನಕ ಪುಷ್ಯರಾಗ ಹರಳು ಧರಿಸಿ. ವೀರಭದ್ರರನ್ನು ಆರಾಧಿಸಿ. ಗಣಪತಿ ಮಂತ್ರ ಪಠಿಸಿ. ಮಹಾಲಕ್ಷ್ಮಿ ಅಷ್ಟಕ ಪಠಿಸಿ.
ಎಚ್.ಸ್ವಾತಿ, ಚಳ್ಳಕೆರೆ
ಜನನ 16-6-1994 ಸಮಯ 4-30 ಸಂಜೆ.
ಪ್ರಶ್ನೆ: ನಾನು ಎಸ್.ಎಸ್.ಎಲ್.ಸಿ ಪಾಸಾಗಿದ್ದೇನೆ. ಮುಂದಿನ ವಿದ್ಯಾಭ್ಯಾಸ, ಮದುವೆ, ಜೀವನದ ಬಗ್ಗೆ ತಿಳಿಸಿ.
ಉತ್ತರ: ನಿಮ್ಮದು ತುಲಾ ಲಗ್ನ, ಪೂರ್ವಾಫಾಲ್ಗುಣಿ ನಕ್ಷತ್ರ ಸಿಂಹರಾಶಿ. ನಿಮ್ಮ ಲಗ್ನಾಧಿಪತಿ ಶುಕ್ರರು ಭಾವದಲ್ಲಿ ಭಾಗ್ಯದಲ್ಲಿದ್ದು, ಪುಷ್ಕರನವಾಂಶದಲ್ಲಿ ವೈರಿ ಕ್ಷೇತ್ರದಲ್ಲಿ ಶನಿ ನಕ್ಷತ್ರ ಸ್ಥಿತರಿದ್ದಾರೆ. ಲಗ್ನವನ್ನು ಯೋಗಿ ಕುಜ, ಮತ್ತು ಪಾಪಿ, ಅವಯೋಗಿ ಕೇತು ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸಾಕಷ್ಟು ಪೀಡಿತರಾಗಿದ್ದಾರೆ.
ನಿಮ್ಮ ಮಾಧ್ಯಮಿಕ ವಿದ್ಯಾ ಸೂಚಕ ಚಥುರ್ತವು ಮಕರ ರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಚಥುರ್ತಾಧಿಪತಿ ಶನಿಯನ್ನು ದಶಮಾಧಿಪತಿ ಚಂದ್ರರು ಬಾಧಕ ಸ್ಥಾನದಿಂದ ವೀಕ್ಷಿಸುತ್ತಾರೆ. ಇದರಿಂದ ನೀವು ನಿಮ್ಮ ಗೆಳೆಯ-ಗೆಳತಿಯರಿಂದ ಹೆಚ್ಚಿನ ಸಹಾಯ ನಿರೀಕ್ಷಿಸುವುದು ಸರಿಯಲ್ಲ.
ನಿಮ್ಮ ಉನ್ನತ ವಿದ್ಯೆ, ಬುದ್ಧಿ ಸೂಚಕ ಪಂಚಮವು ಕುಂಭರಾಶಿಯಾಗಿದ್ದು ಇಲ್ಲಿ ರಾಶ್ಯಾಧಿಪತಿ ಶನಿ, ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಚಂದ್ರ, ಗುರು ಮತ್ತು ರಾಹು ವೀಕ್ಷಿಸುತ್ತಾರೆ. ಬೇರಾವ ಶುಭಸಂಬಂಧವೂ ಇಲ್ಲ. ಈ ಕಾರಣ ದಿಂದ ನಿಮ್ಮ ಮನಸ್ಸು ಚಂಚಲವಾಗಿದ್ದು ನಿಮ್ಮ ಈಗಿನ ನಡುವಳಿಕೆಗಳಿಗೆ ಕಾರಣವಾಗಿದೆ. ಯೋಗಧ್ಯಾನಗಳಿಂದ ಮನಸ್ಸನ್ನು ನಿಯತ್ರಿಸಿಕೊಡರೆ ವಿದ್ಯಾಭ್ಯಾಸಕ್ಕೂ ಉತ್ತಮ.
ನಿಮ್ಮ ವಿದ್ಯಾ ಸೂಚಕ ಅಂಶ ಕುಂಡಲಿಯ ಲಗ್ನವು ಕರ್ಕಾಟಕ ವಾಗಿದ್ದು ಲಗ್ನದಲ್ಲಿ ವಕ್ರೀ ಬುಧ, ರಾಹು ಮತ್ತು ಕೇತು ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಸ್ಥಿತರಿದ್ದು, ನೀವು ಶೃದ್ಧೆ, ಶ್ರಮ ವಹಿಸಿ, ಮನಸ್ಸನ್ನು ನಿಯಂತ್ರಿಸಿ ವಿದ್ಯಾಭ್ಯಾಸವನ್ನು ಮುಂದುವರಿಸಿದರೆ ನೀವು ತಿಳಿಸಿದ ಮೆಡಿಕಲ್ ವಿಷಯದಲ್ಲಿ ಯಶಸ್ಸು ಗಳಿಸಬಲ್ಲಿರಿ.
ನಿಮ್ಮ ದಾಂಪತ್ಯ ಸೂಚಕ ನವಾಂಶ ಕುಂಡಲಿಯಲ್ಲಿ ಲಗ್ನದಲ್ಲಿ ರಾಹು ಮತ್ತು ಸಪ್ತಮದಲ್ಲಿಕೇತು ಸ್ಥಿತರಿದ್ದು ದಾಂಪತ್ಯ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಸೂಚಿಸುತ್ತಾರೆ. ಈ ಕಾರಣ ಮದುವೆಗೆ ಮೊದಲು ಅರ್ಕವಿವಾಹ ಮಾಡಿಸಿ ಕೊಳ್ಳುವುದು ವಿಹಿತ.
ನಿಮಗೆ ಈಗ ಚಂದ್ರ ದೆಶೆ, ಶುಕ್ರ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಸಾಡೇಸಾತಿ ಮತ್ತು ಷಷ್ಟ ಗುರು ಇದ್ದಾರೆ. ಇವು ಶುಭಕರವಲ್ಲ. ಆದ್ದರಿಂದ ತಾತ್ಕಾಲಿಕ ತೊಂದರೆಗಳಿಗೆ ಹೆದರದೆ ಶೃದ್ಧೆಯಿಂದ ವಿದ್ಯಾಭ್ಯಾಸ ಮುಂದುವರಿಸಿ.
ಪರಿಹಾರ: ಪಚ್ಛೆಹರಳು ಮತ್ತು ಮುತ್ತು ಧರಿಸಿ. ಸುಬ್ರಮಣ್ಯ ಸ್ತೋತ್ರ ಪಠಿಸಿ. ದುರ್ಗಾದೇವಿಯನ್ನು ಆರಾಧಿಸಿ.
ಹೆಸರು ಬೇಡ
ಜನನ 17-10-1966 ಸಮಯ ರಾತ್ರಿ 4-00 ಗಂಟೆ.
ಪ್ರಶ್ನೆ: ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಉದ್ಯೋಗ ಮಾಡಲು ಸಾಧ್ಯವೇ? ಮನೆ ಹೊಂದುವ ಯೋಗವಿದೆಯೇ? ತಿಳಿಸಿ
ಉತ್ತರ: ನಿಮ್ಮದು ಸಿಂಹ ಲಗ್ನ, ಅನುರಾಧ ನಕ್ಷತ್ರ ವೃಶ್ಚಿಕರಾಶಿ. ಲಗ್ನದ ಸೂಕ್ಷ್ಮಾಧಿಪತಿ ಶುಕ್ರರು ನೀಚರಾಗಿ, ಲಗ್ನಾಧಿಪತಿ ರವಿಯೊಡನೆ ಧನಸ್ಥಾನ ಸ್ಥಿತರಿದ್ದು ಅಸ್ತರಾಗಿದ್ದಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ತುಂಬಾ ಪೀಡಿತರಾಗಿದ್ದಾರೆ.
ನಿಮ್ಮ ಉದ್ಯೋಗ ಸೂಚಕ ದಶಮವು ವೃಷಭರಾಶಿಯಾಗಿದ್ದು, ದಗ್ಧರಾಶಿಯಾಗಿದೆ. ದಶಮಾಧಿಪತಿ ಶುಕ್ರರು ನೀಚರಾಗಿ, ಅಸ್ತರಾಗಿ, ವೈರಿ ರವಿಯೊಡನೆ ಧನಸ್ಥಾನ ಸ್ಥಿತರಿದ್ದಾರೆ. ಷಡ್ಬಲದಲ್ಲಿ ಬಲಹೀನರಾಗಿದ್ದಾರೆ. ದಶಮವನ್ನು ಷಷ್ಟಾಧಿಪತಿ ವಕ್ರೀ ಶನಿ ಸಪ್ತಮದಿಂದ ವೀಕ್ಷಿಸುತ್ತಾರೆ. ಇವು ನಿಮಗೆ ಹೆಚ್ಚಿನ ಸಂಪಾದನೆಯ ಉದ್ಯೋಗ ಸೂಚಿಸುವುದಿಲ್ಲ.
ನಿಮ್ಮ ಧನಾಧಿಪತಿ ಬುಧರು ತೃತೀಯದಲ್ಲಿ ಯೋಗಿ ಕೇತು ಒಡನೆ ಸಂಪೂರ್ಣ ಯುತಿ ಹೊಂದಿದ್ದು, ಗುರು ನಕ್ಷತ್ರ ಸ್ಥಿತರಿದ್ದಾರೆ. ನಿಮ್ಮ ಭಾಗ್ಯಸ್ಥಾನ ಮೇಷದಲ್ಲಿ ಅವಯೋಗಿ ರಾಹು ಸ್ಥಿತರಿದ್ದು ಧನಾಧಿಪತಿ ಬುಧರಿಂದ ವೀಕ್ಷಿತರಾಗಿದ್ದಾರೆ. ಸುಖ, ಭಾಗ್ಯಾಧಿಪತಿ ಕುಜರು ಭಾವದಲ್ಲಿ ವ್ಯಯಸ್ಥಿತರಿದ್ದಾರೆ. ಇವು ಶುಭಕರವಲ್ಲ.
ನಿಮ್ಮ ತ್ರಿಂಶಾಂಶ ಕುಂಡಲಿಯ ಲಗ್ನವು ತುಲಾ ಆಗಿದ್ದು ಲಗ್ನಾಧಿಪತಿ ಶುಕ್ರರು ಮಿತ್ರ ಕ್ಷೇತ್ರದಲ್ಲಿ ಸುಖಸ್ಥಾನ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಆದರೂ ನಿಮ್ಮ ಅಷ್ಟಕವರ್ಗ ಕುಂಡಲಿಯ ಬಿಂದುಗಳು ನಿಮ್ಮ ಮುಂದಿನ ಜೀವನದಲ್ಲಿ ಉತ್ತಮ ಪ್ರಗತಿ ತೋರಿಸುತ್ತಿರುವುದರಿಂದ ನೀವು ಈ ಅರ್ಥಿಕ ಮುಗ್ಗಟ್ಟಿನಿಂದ ಹೊರಬರುವ ಸಾಧ್ಯತೆ ಹೆಚ್ಚಿಗೆ ಇದೆ.
ನಿಮ್ಮ ಕುಂಡಲಿಯಂತೆ ನಿಮಗೆ ಮನೆ ಹೊಂದುವ ಭಾಗ್ಯವು ಸೂಚಿತವಾಗುವುದಿಲ್ಲ. ಆದರೆ ನಿಮ್ಮ ಯಜಮಾನರಿಗೆ ಆ ಯೋಗವಿದ್ದರೆ ನೀವು ಮನೆ ಹೊಂದುವ ಸಾಧ್ಯತೆ ಹೆಚ್ಚು.
ನಿಮಗೆ ಈಗ ಶುಕ್ರದಶಾ ಕುಜ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಲಾಭಶನಿ ತೃತೀಯ ಗುರು ಇದ್ದಾರೆ. ಅವು ಅಷ್ಟು ಶುಭಕರವಲ್ಲ. 2013ರ ನಂತರ ಗುರು ಭುಕ್ತಿಯಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುವುದು.
ಪರಿಹಾರ: ೆರ್ಕಾನ್ ಮತ್ತು ಮಾಣಿಕ್ಯ ಧರಿಸಿ. ದುರ್ಗಾತ್ರಿಶತಿ ಪಠಿಸಿ. ಸುಬ್ರಮಣ್ಯರನ್ನು ಆರಾಧಿಸಿ.
ಎ.ಎಲ್.ಶಿವಣ್ಣ ರೆಡ್ಡಿ, ಚಿತ್ರದುರ್ಗ
ಮನೆಯ ಎರಡು ನಕ್ಷೆ ಕಳಿಸಿದ್ದೇನೆ. ಯಾವುದು ಉತ್ತಮ ಮತ್ತು ಬದಲಾವಣೆ ಇದ್ದರೆ ತಿಳಿಸಿ.
ಉತ್ತರ: ನಿಮ್ಮದು ಪಶ್ಚಿಮ ರಸ್ತೆ ಇರುವ ನಿವೇಶನವಾಗಿದೆ. ಮನೆಯ ಸುತ್ತಲೂ ಬಿಡುವ ಖಾಲಿ ಜಾಗವನ್ನು ಪಿಶಾಚ ವೀಧಿ ಎನ್ನುತ್ತೇವೆ. ಇದು ಉತ್ತರ ಮತ್ತು ಪೂರ್ವದಲ್ಲಿ ಹೆಚ್ಚು ಇರಬೇಕು. ಆದರೆ ನಿಮ್ಮ ನಕ್ಷೆಯಂತೆ ಉತ್ತರ, ಪಶ್ಚಿಮ ಮತ್ತು ದಕ್ಷಿಣಕ್ಕೆ ಪೂರ್ವಕ್ಕಿಂತ ಹೆಚ್ಚು ಜಾಗವಿದೆ. ದಕ್ಷಿಣ, ಯಮನ ಸ್ಥಾನವಾಗಿದ್ದು ಇಲ್ಲಿ ಹೆಚ್ಚಿನ ಸ್ಥಳವಿರುವುದು ಅಶುಭಕರ. ಈ ಕಾರಣದಿಂದ ಪಶ್ಚಿಮದ ಮೆಟ್ಟಿಲುಗಳನ್ನು ಉತ್ತರ ವಾಯವ್ಯಕ್ಕೆ ಬದಲಾಯಿಸಿ ಈ ದೋಷ ಸರಿಪಡಿಸಿಕೊಳ್ಳಿ.
ನಿಮ್ಮ ಮನೆಯ ಮುಖ್ಯದ್ವಾರ ಉತ್ತರದಲ್ಲಿ ನೀಚ ಕೇತು ಸ್ಥಾನದಲ್ಲಿದೆ. ಅದನ್ನು ವರಾಂಡದ ಇನ್ನೊಂದು ಕಡೆಗೆ, ಅಂದರೆ ಪಶ್ಚಿಮಕ್ಕೆ ಜರುಗಿಸಿದರೆ ಅದು ಉಚ್ಛಸ್ಥಾನ ವಾಗುತ್ತದೆ. ಇದು ಶುಭಕರ. ನಿಮ್ಮ ಮನೆಗೆ 9 ಬಾಗಿಲುಗಳಿದ್ದು ಇದು ಗೃಹಪೀಡೆ ತರುತ್ತದೆ. ಈ ಕಾರಣದಿಂದ ಅಡುಗೆಮನೆ ಅಥವಾ ಪೆಸ್ಸೇಜ್ ಬಾಗಿಲು ಕಡಿಮೆ ಮಾಡಿ, 8 ಬಾಗಿಲು ಇರುವಂತೆ ನೋಡಿಕೊಳ್ಳಿ. 8 ಬಾಗಿಲು ಯಜಮಾನನಿಗೆ ಪ್ರಗತಿ ಉಂಟುಮಾಡುತ್ತದೆ. ನಿಮ್ಮ ಎರಡನೇ ನಕ್ಷೆಯಲ್ಲಿ ಪಾಯ ಆಯತಾಕಾರವಿಲ್ಲವಾದ್ದರಿಂದ ಅದು ದೋಷಕರ. ಮನೆ ಸಂಪೂರ್ಣಗೊಂಡ ನಂತರ ವಾಸ್ತು ಪೂಜೆ ತಪ್ಪದೇ ಮಾಡಿಸಿ.
ಅಶೋಕ ಅವರಾದಿ, ಗೋಕಾಕ
ಮನೆ ನಕ್ಷೆ ಕಳಿಸಿದ್ದೇನೆ. ದೋಷವಿದ್ದರೆ ತಿಳಿಸಿ.
ಉತ್ತರ: ಮನೆಗೆ ಕಂಪೌಂಡ ಇರಬೇಕು ಅಥವಾ ಬೇಲಿ ಆದರೂ ಇರಲೇಬೇಕು. ನಿಮ್ಮ ಮನೆಗೆ ಕಂಪೌಂಡ ಅಥವಾ ಬೇಲಿ ಇದೆಯೋ ತಿಳಿಸಿಲ್ಲ. ಇಲ್ಲದಿದ್ದರೆ ಉತ್ತರ ಮತ್ತು ಪೂರ್ವಕ್ಕೆ ಹೆಚ್ಚು ಖಾಲಿ ಜಾಗವಿರುವಂತೆ ನಿರ್ಮಿಸಿಕೊಳ್ಳಿ.
ಮನೆ ಮುಖ್ಯದ್ವಾರ ನೀಚಸ್ಥಾನದಲ್ಲಿದೆ. ನಿಮ್ಮ ರಾಶಿಗೆ ಸರಿ ಹೊಂದುವುದಾದರೆ ಇದನ್ನು ದಕ್ಷಿಣಕ್ಕೆ ಉಚ್ಛಸ್ಥಾನಕ್ಕೆ ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ಮನೆಯಲ್ಲಿ ವಾಸ್ತು ಯಂತ್ರವನ್ನು, ಮನೆಯ ಈಶಾನ್ಯ ಮೂಲೆಯಲ್ಲಿ ಗೋಡೆ ಒಳಗೆ ಸ್ಥಾಪಿಸಿ. ಅಡುಗೆ ಮನೆಯಲ್ಲಿ ಅಗ್ನಿ ಮೂಲೆಯಲ್ಲಿ ನೀರು ಬಚ್ಚಲು ಇರುವುದು ತಪ್ಪು. ಅಲ್ಲಿ ಅಡುಗೆ ಒಲೆ ಸ್ಥಾಪಿಸಿ ನೀರ ಬಚ್ಚಲನ್ನು ನೀರಿನ ಟಾಕಿ ಪಕ್ಕ ನಿರ್ಮಿಸಿ ಕೊಳ್ಳಿ.
ಮನೆಗೆ ಎಷ್ಟು ಬಾಗಿಲು ಇವೆ ತಿಳಿಸಿಲ್ಲ. ಮನೆಗೆ ಸಮ ಸಂಖ್ಯೆಯ ಬಾಗಿಲು, 10ನ್ನು ಬಿಟ್ಟು, ಇರುವುದು ಶುಭಕರ.
ನಿಮ್ಮ ಮನೆಯ ಎಲ್ಲ ಕೋಣೆಗಳು ಉತ್ತರಕ್ಕಿವೆ. ಓಡಾಡಲು ಜಾಗ ದಕ್ಷಿಣಕ್ಕಿದೆ. ಸಾಧ್ಯವಾದರೆ ಓಡಾಡುವ ಜಾಗ ಉತ್ತರಕ್ಕೆ ಬರುವಂತೆ ಬದಲಾಯಿಸಿಕೊಳ್ಳಿ. ಇದು ಶುಭಕರ.
ಇವೆಲ್ಲ ಬದಲಾವಣೆ ಮಾಡಿಸಿ ವಾಸ್ತು ಪೂಜೆ ಮಾಡಿಸಿ.
ಪ್ರಶ್ನೆ ಈ ವಿಳಾಸಕ್ಕೆ ಕಳುಹಿಸಿ: ಸಂಪಾದಕರು, ಪ್ರಜಾವಾಣಿ, ಜ್ಯೋತಿಷ ವಿಭಾಗ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು- 01
ದೂರವಾಣಿ ಸಂಖ್ಯೆ: 22445707
ಸಮಯ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30