ಪಣಜಿ:ಗೋವಾದ ಬಿಜೆಪಿ ನಾಯಕ ಮನೋಹರ್ ಪಾರಿಕ್ಕರ್ ಅವರು ಅಡ್ವಾಣಿ ಬಗ್ಗೆ ನೀಡಿದ ಹೇಳಿಕೆಯ ಮೂಲಕ ಪಕ್ಷದ ನಾಯಕತ್ವದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದ್ದೆಯಾದರೂ ‘ನಾನು ಯಾವ ತಪ್ಪೂ ಮಾಡಿಲ್ಲ ಮತ್ತು ಗಾಬರಿಗೊಳ್ಳುವ ಪ್ರಸಂಗವೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ನಾನ್ಯಾಕೆ ಹೆದರಲಿ, ನಾನು ಏನೂ ತಪ್ಪು ಮಾಡಿಲ್ಲ, ನನ್ನ ಹೇಳಿಕೆಗಳಲ್ಲಿ ಯಾವುದೇ ವಿವಾದವೂ ಇಲ್ಲ. ಅಡ್ವಾಣಿ ಅವರೇ ನನ್ನ ನಾಯಕ ಎಂಬುದನ್ನು ನಾನು ಟಿವಿ ಸಂದರ್ಶನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ.
ಕೊಂಕಣಿ ಭಾಷೆಯಲ್ಲಿದ್ದ ಈ ಸಂದರ್ಶನದ ಇಂಗ್ಲಿಷ್ ಅನುವಾದವನ್ನು ದೆಹಲಿಯಲ್ಲಿರುವ ಪಕ್ಷದ ನಾಯಕರಿಗೆ ಕಳುಹಿಸಿಕೊಡಲಾಗಿದೆ’ ಎಂದು ಪಾರಿಕ್ಕರ್ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.