ಬೆಂಗಳೂರು: ವಿಧಾನಸೌಧಕ್ಕೆ ದಿಗ್ಬಂಧನ ವಿಧಿಸಲು ಪ್ರಯತ್ನಿಸಿದ ಕಾಂಗ್ರೆಸ್ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ವಿಧಾನ ಸೌಧದ ನಾಲ್ಕು ಕಡೆಯಿಂದಲೂ ನುಗ್ಗಲು ಪ್ರಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರಷ್ಟೇ ಅಲ್ಲದೇ ನೂರಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಬಂಧಿಸಿದರು.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿಯ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂತಾದವರ ನೇತೃತ್ವದಲ್ಲಿ ಯೋಜಿಸಲಾಗಿದ್ದ ಮುತ್ತಿಗೆಯನ್ನು ತಡೆಯಲು ವಿಧಾನಸೌಧಕ್ಕೆ ಪೊಲೀಸ್ ದಿಗ್ಬಂಧನವಿತ್ತು. ಕಾಂಗ್ರೆಸ್ ನಾಯಕರು ವಿಧಾನಸೌಧದೊಳಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಂತೆಯೇ ಪೊಲೀಸರು ಅದನ್ನು ತಡೆಯುವುದಕ್ಕೆ ಕಠಿಣ ಕ್ರಮಗಳನ್ನೇ ಅನುಸರಿಸಿದರು. ಪರಿಣಾಮವಾಗಿ ಕೆಲವು ಹಿರಿಯ ಕಾಂಗ್ರೆಸ್ ನಾಯಕರೂ ಪೊಲೀಸರ 'ಕಠಿಣ ಕ್ರಮದ' ರುಚಿ ಅನುಭವಿಸಬೇಕಾಯಿತು.
ವಿಧಾನ ಸೌಧ ದಿಗ್ಭಂಧನ ಚಳವಳಿಯನ್ನು ಬಹಳ ಮೊದಲೇ ಘೋಷಿಸಿದ್ದರೂ ಅದನ್ನು ನಿರ್ವಹಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳದೇ ಪೊಲೀಸರಿಂದ ನಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 'ಈ ಪೊಲೀಸರು ನಮ್ಮ ಮೇಲೆಯೇ ದೈಹಿಕ ದಾಳಿ ನಡೆಸುತ್ತಾರೆ. ಇನ್ನು ಸಾಮಾನ್ಯರ ಪಾಡೇನು?' ಎಂದು ಪ್ರಶ್ನಿಸಿದರು. ನಾಯಕರು ಮತ್ತು ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಮಕುಮಾರ್ ಅವರು ಧರಣಿ ನಡೆಸಿದರು.