ನವದೆಹಲಿ(ಪಿಟಿಐ): ಹೋವಿಟ್ಜರ್ ಯುದ್ಧ ಫಿರಂಗಿ ಮಾರಾಟ ಒಪ್ಪಂದದಲ್ಲಿ ಸುಮಾರು 64 ಕೋಟಿ ರೂಪಾಯಿಗಳ ಕಮಿಷನ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಕ್ವಟ್ರೋಚಿಯನ್ನು ತನ್ನ ವಶಕ್ಕೆ ಪಡೆಯುವ ಸರ್ಕಾರದ ಎಲ್ಲ ಪ್ರಯತ್ನಗಳು ವಿಫಲವಾಗಿರುವುದಾಗಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಂ ತಿಳಿಸಿದರು.
ಬೋಫೋರ್ಸ್ ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಸಾಬೀತಾಗಿಲ್ಲವೆಂದು ದೆಹಲಿ ಹೈಕೋರ್ಟ್ 2004ರಲ್ಲಿ ಅಭಿಪ್ರಾಯಪಟ್ಟಿರುವುದನ್ನು ಗಣನೆಗೆ ತೆಗೆದುಕೊಂಡು, ಈ ಪ್ರಕರಣವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಸಿಬಿಐ ಮಾಡಿರುವುದಾಗಿ ಅವರು ಹೇಳಿದರು. ಸರ್ಕಾರವು ಪ್ರಕರಣದ ಎಲ್ಲ ಅಂಶಗಳನ್ನು ಪರಿಗಣಿಸಿ, ಮೇಲಿನ ನಿರ್ಧಾರ ಕೈಗೊಂಡಿರುವುದಾಗಿಯೂ ಅವರು ನುಡಿದರು.
ಸುಪ್ರೀಂಕೋರ್ಟ್ನಲ್ಲಿ ಸಾಲಿಸಿಟರ್ ಜನರಲ್ ನೀಡಿದ ಹೇಳಿಕೆಗೆ ತಕ್ಷಣವೇ ಪ್ರತಿಪಕ್ಷ ಬಿಜೆಪಿ ಮತ್ತು ಅದರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಮಾತ್ರ ಪ್ರಕರಣ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿರುವುದರಿಂದ ಏನನ್ನೂ ಹೇಳುವುದಿಲ್ಲ ಎಂದಿದೆ.
ಸರ್ಕಾರ ಮತ್ತು ಸಿಬಿಐ ಪ್ರಕರಣವನ್ನು ಅಂತ್ಯಗೊಳಿಸಲು ನಿರ್ಧರಿಸಿರುವುದನ್ನು ಕ್ವಟ್ರೋಚಿಯ ಲಂಡನ್ ಬ್ಯಾಂಕ್ ಖಾತೆ ಮುಟ್ಟುಗೋಲಿನಿಂದ ಮುಕ್ತಗೊಂಡಿರುವುದರ ವಿರುದ್ಧ 2006ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದ ವಕೀಲ ಅಜಯ್ ಅಗರವಾಲ್ ವಿರೋಧಿಸಿದರು.