ನವದೆಹಲಿ (ಪಿಟಿಐ): ‘ಅಡುಗೆ ಅನಿಲ (ಎಲ್ಪಿಜಿ) ಸಬ್ಸಿಡಿ ಬಿಟ್ಟುಕೊಡಲು ಶ್ರೀಮಂತರು ಹೆಚ್ಚು ಉದಾರ ಧೋರಣೆ ತಳೆಯಬೇಕು’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒತ್ತಾಯಿಸಿದ್ದಾರೆ.
‘ಎಲ್ಪಿಜಿ ಸಬ್ಸಿಡಿಯನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುವ ಯೋಜನೆಗೆ ಶ್ರೀಮಂತರು ಸೂಕ್ತವಾಗಿ ಸ್ಪಂದಿಸಿಲ್ಲ . ₹ 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರ ಪೈಕಿ ಕೇವಲ ಶೇ 3ರಷ್ಟು ಜನರು ಮಾತ್ರ ಸಬ್ಸಿಡಿ ಬಿಟ್ಟು ಕೊಟ್ಟಿರುವುದು ಅಧ್ಯಯನದಿಂದ ತಿಳಿದು ಬಂದಿದೆ’ ಎಂದು ಅವರು ಹೇಳಿದರು. ಸೋಮವಾರ ಇಲ್ಲಿ ನಡೆದ ‘ಸುಸ್ಥಿರ ಅಭಿವೃದ್ಧಿಗೆ ಮಹಿಳಾ ಸಬಲೀಕರಣ’ಕ್ಕೆ ಸಂಬಂಧಿಸಿದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
‘ಬಡ ಕುಟುಂಬದ ಮಹಿಳೆಯರಿಗೆ ಎಲ್ಪಿಜಿ ಸಬ್ಸಿಡಿ ನೀಡುವುದು ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಆರ್ಥಿಕತೆ ಜತೆ ತಳಕು ಹಾಕಿಕೊಂಡಿದೆ. ವರ್ಷಕ್ಕೆ
₹ 10 ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸುವವರು ಎಲ್ಪಿಜಿ ಸಬ್ಸಿಡಿ ಬಿಟ್ಟುಕೊಡುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಇದಕ್ಕೆ ಉತ್ತೇಜಕರ ಪ್ರತಿಕ್ರಿಯೆ ದೊರೆತಿಲ್ಲ. ಮಧ್ಯಮ ವರ್ಗದವರು ಮತ್ತು ನಿವೃತ್ತರು ಮಾತ್ರ ಹೆಚ್ಚು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ಇಲ್ಲಿಯವರೆಗೆ 85 ಲಕ್ಷದಷ್ಟು ಜನರು ತಮ್ಮ ಎಲ್ಪಿಜಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ’ ಎಂದು ಪ್ರಧಾನ್ ಹೇಳಿದರು.