ಕುಂದಲಹಳ್ಳಿ ಪ್ರದೇಶದಲ್ಲಿ ‘ಬೆಂಗಳೂರು ಜಲ ಮಂಡಳಿ’ಯವರು ಕಾವೇರಿ ನೀರಿನ ಸಂಪರ್ಕ ಕೊಟ್ಟು ಹತ್ತಿರ ಒಂದು ವರ್ಷವಾಯಿತು. ಈಗೆ 3 ತಿಂಗಳವರೆವಿಗೂ ಕಾವೇರಿ ನೀರು ಸರಬರಾಜು ಮಾಡುತ್ತಿದ್ದರು. ಇದಕ್ಕೂ ಮೊದಲು ಊರಿನಲ್ಲಿ ಇರುವ ಕೆರೆಯಲ್ಲಿ ಹಾಕಿರುವ ಬೋರ್ವೆಲ್ ನೀರು ಬಿಡುತ್ತಿದ್ದರು. ಅದಕ್ಕಾಗಿ ನಾವು ಕಾರ್ಪೊರೇಷನ್ಗೆ ಹಣ ಪಾವತಿಸಿದ್ದೆವು. ಕಾವೇರಿ ನೀರು ಬಂದ ಮೇಲೆ ಬೋರ್ವೆಲ್ ಕನೆಕ್ಷನ್ ಸ್ಥಗಿತ ಮಾಡಿದರು.
ನಂತರ ಕಾವೇರಿ ನೀರು ಬಂದ ಮೇಲೆ ಅದಕ್ಕೆ ಹಣ ಕಟ್ಟಬೇಕೆಂದು ಕೇಳಿದರು. ಅದಕ್ಕೂ ನಾವು 15 ರಿಂದ 30 ಸಾವಿರದವರೆವಿಗೂ ಹಣ ಪಾವತಿಸಿದೆವು. ಹಣ ಕಟ್ಟುವವರೆವಿಗೂ ಸುಮ್ಮನಿದ್ದ ಮಂಡಳಿ, ಬಹಳ ಜನ ಕಟ್ಟಲಿಲ್ಲವೆಂದು ಹೇಳಿ ಕಾವೇರಿ ನೀರನ್ನು ಬರದಂತೆ ಮಾಡಿದ್ದಾರೆ. ಈ ಮೂರು ತಿಂಗಳಿಂದಲೂ ನಾವು ಪಡಬಾರದ ಕಷ್ಟ ಪಡುತ್ತಿದ್ದೇವೆ.
ಇದನ್ನೇ ಬಂಡವಾಳ ಮಾಡಿಕೊಂಡು ಈ ಊರಿನ ಪಟ್ಟಭದ್ರರು ಸಾಕಷ್ಟು ಬೋರ್ ಕೊರೆಯಿಸಿ ಟ್ಯಾಂಕರ್ಗಳನ್ನು ಇಟ್ಟುಕೊಂಡು ಇಷ್ಟಬಂದ ಬೆಲೆಗೆ ನೀರು ಮಾರಿ ಹಣ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಜಲಮಂಡಳಿಯು ಶಾಮೀಲಾಗಿರುವ ಶಂಕೆ ಇದೆ. ಜಲಮಂಡಳಿಯಲ್ಲಿ ಕೇಳಿದರೆ ನಾವು ಟ್ಯಾಂಕರ್ನಿಂದ ನೀರು ಬಿಡುತ್ತೇವೆ ಎಂದು ಒಂದು ಫೋನ್ ನಂಬರ್ ಕೊಟ್ಟಿರುತ್ತಾರೆ. ಅದಕ್ಕೆ ಕರೆ ಮಾಡಿದರೆ, ಗಾಡಿ ಕೆಟ್ಟಿದೆ ಎಂದು ಸಬೂಬು ಹೇಳುತ್ತಾರೆ. ಈ ಸಮಸ್ಯೆಗೆ ಶೀಘ್ರ ಸ್ಪಂದಿಸಬೇಕೆಂದು ಕೋರಿಕೆ.