ನವದೆಹಲಿ: ಕರ್ನಾಟಕದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ ರೈತರ ಅಧಿವೇಶನದಲ್ಲಿ ಈ ಬಗ್ಗೆ ಚಕಾರ ಎತ್ತಲಿಲ್ಲ ಎಂದು ಲೋಕಸಭೆಯಲ್ಲಿ ಜೆಡಿಎಸ್ನ ಎಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಬಜೆಟ್ ಚರ್ಚೆಯಲ್ಲಿ ಭಾಗವಹಿಸಿದ ಅವರು, ‘ರಾಜ್ಯದ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ 110 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗಾಗಿ ಸರ್ಕಾರ ಏನು ಯೋಜನೆ ಹಾಕಿಕೊಂಡಿದೆ’ ಎಂದು ಪ್ರಶ್ನಿಸಿದರು.
‘ದೊಡ್ಡ ಉದ್ಯಮಗಳಿಗೆ ಕೊಟ್ಟಿರುವ ಸಾಲ ವಸೂಲು ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ನಮ್ಮ ರಾಜ್ಯದ ಉದ್ಯಮಿಯ ಹೆಸರೂ ಪ್ರಸ್ತಾಪವಾಗು ತ್ತಿದೆ. 50 ಸಾವಿರ, ಒಂದು ಲಕ್ಷ ರೂಪಾಯಿ ಸಾಲ ಪಡೆದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ಮೊತ್ತದ ಸಾಲ ಪಡೆದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ’ ಎಂದರು.
ತಂಬಾಕು ಬೆಳೆಗಾರರ ಸಮಸ್ಯೆ ಕುರಿತು ಪ್ರಸ್ತಾಪಿಸಿ, ‘ಬೀಡಿ ಮೇಲೆ ತೆರಿಗೆ ಹಾಕಿಲ್ಲ. ಸಿಗರೇಟ್ಗೆ ತೆರಿಗೆ ಹಾಕಿದ್ದೀರಿ. ಈ ತಾರತಮ್ಯ ಏಕೆ. ಸಿಗರೇಟ್ ಮಾತ್ರ ಕ್ಯಾನ್ಸರ್ಗೆ ಕಾರಣವೆ. ಸಿಗರೇಟ್ ಸೇದದವರಿಗೆ ಕ್ಯಾನ್ಸರ್ ಬರುವುದಿಲ್ಲವೆ. ನೀವು ತಂಬಾಕು ಸೇವನೆ ನಿರ್ಬಂಧಿಸುವುದಾದರೆ ಅಭ್ಯಂತರವಿಲ್ಲ. ಆದರೆ, ಪರ್ಯಾಯ ಬೆಳೆ ಯೋಜನೆ ರೂಪಿಸಿ’ ಎಂದು ಸಲಹೆ ಮಾಡಿದರು.
ರೇಷ್ಮೆ ಬೆಳೆಗಾರರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಮನಗರ, ಕೋಲಾರದಲ್ಲಿ ಅನೇಕ ರೇಷ್ಮೆ ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೀನಾ ರೇಷ್ಮೆ ಆಮದಿನ ಮೇಲೆ ಶೇ 30ರಷ್ಟು ಸುಂಕ ಹಾಕಿ ರೈತರನ್ನು ಉಳಿಸಿ ಎಂದು ಮನವಿ ಮಾಡಿದರು.
ಆಲೂಗೆಡ್ಡೆ ಬಿತ್ತನೆ ಬೀಜ ಕಳಪೆಯಾಗಿದೆ. ಪಂಜಾಬ್ ಆಲೂಗೆಡ್ಡೆ ಬದಲಿಗೆ ಹಾಲೆಂಡಿನಿಂದ ಬಿತ್ತನೆ ಬೀಜ ತರಿಸಿ ರೈತರಿಗೆ ವಿತರಿಸಿ ಎಂದು ಒತ್ತಾಯಿಸಿದರು.