ಹೊಸಕೆರೆಹಳ್ಳಿ ರಿಂಗ್ ರಸ್ತೆಯ ವೀರಭದ್ರನಗರ ಸಿಗ್ನಲ್ನಿಂದ ಒಂದೂವರೆ ಕಿ.ಮೀ. ದೂರದ ಕೆರೆಕೋಡಿ ರಸ್ತೆಯ ಗೋಳು ಹೇಳತೀರದಾಗಿದೆ. ಸಿಗ್ನಲ್ನ ಪ್ರಾರಂಭದಲ್ಲೇ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನಾಲ್ಕೂ ದಿಕ್ಕುಗಳಿಗೆ ಅಡ್ಡಾದಿಡ್ಡಿಯಾಗಿ ಚಲಿಸುವುದರಿಂದ ಬೆಳಿಗ್ಗೆ ಮತ್ತು ಸಂಜೆ ಟ್ರಾಫಿಕ್ ಜಾಮ್ನ ಕಿರಿಕಿರಿ ಇರುತ್ತದೆ.
ಸಿಗ್ನಲ್ ಹತ್ತಿರದಲ್ಲೇ ರಸ್ತೆಯ ಎರಡೂ ಬದಿಗಳಲ್ಲಿ ಮದ್ಯದಂಗಡಿ, ಮಾಂಸದಂಗಡಿ, ಹೋಟೆಲ್, ವರ್ಕ್ಶಾಪ್ಗಳು ಇದ್ದು ಅವುಗಳ ಬಳಕೆದಾರರು ರಸ್ತೆಯ ಎರಡೂ ಪಕ್ಕಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ, ಆ ಜಾಗದಲ್ಲಿ ಸುಗಮ ಸಂಚಾರ ದುಸ್ಸಾಧ್ಯವಾಗಿದೆ.
ಸಿಗ್ನಲ್ನಿಂದ ಅರ್ಧ ಕಿ.ಮೀ, ದೂರದವರೆಗಿನ ರಸ್ತೆ ಬದಿಯನ್ನು ಖಾಸಗಿ ಬಸ್, ಮಿನಿ ಬಸ್, ಟೆಂಪೋ, ಟ್ಯಾಕ್ಸಿ, ಆ್ಯಂಬುಲೆನ್ಸ್ಗಳು ಸ್ವಯಂಘೋಷಿತ ಪಾರ್ಕಿಂಗ್ ಸ್ಥಳವಾಗಿ ಮಾಡಿಕೊಂಡಿವೆ. ಉದ್ದಕ್ಕೂ ನಿಂತಿರುವ ಇವುಗಳ ನಡುವೆ ಮರೆಯಾಗಿದ್ದುಕೊಂಡು ದರೋಡೆಕೋರರು ರಾತ್ರಿವೇಳೆ ಈ ದಾರಿಯಲ್ಲಿ ಸಂಚರಿಸುವವರನ್ನು ದೋಚಿರುವುದೂ ಉಂಟು.
ರಸ್ತೆಯುದ್ದಕ್ಕೂ ದೊಡ್ಡ ಗುಂಡಿಗಳು ಬಾಯಿಬಿಟ್ಟು ಬಲಿಗಾಗಿ ಕಾಯುತ್ತಿವೆ. ಎಂದೋ ರಸ್ತೆಗೆ ಹಾಕಿದ್ದ ಟಾರು ಕಿತ್ತುಹೊಗಿದ್ದು, ನಿರಂತರವಾಗಿ ಚಲಿಸುವ ವಾಹನಗಳಿಂದಾಗಿ ಇಡೀ ಪರಿಸರ ದೂಳುಮಯವಾಗಿದೆ. ಆಸುಪಾಸಿನ ನಿವಾಸಿಗಳು ದೂಳು ಕುಡಿದು ಆಸ್ಪತ್ರೆ ಸೇರುತ್ತಿದ್ದಾರೆ.
ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರು, ಬಿಬಿಎಂಪಿ ಅಧಿಕಾರಿಗಳು, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ದಯಮಾಡಿ ಇತ್ತ ಗಮನಹರಿಸಿ, ಕೆರೆಕೋಡಿ ರಸ್ತೆಯ ಗೋಳುನ್ನು ನಿವಾರಣೆ ಮಾಡಬೇಕಾಗಿ ವಿನಂತಿ.