ಹೆಲ್ಮೆಟ್ ಕಡ್ಡಾಯವೆಂಬ ಭೂತ ದ್ವಿಚಕ್ರವಾಹನ ಸವಾರರಿಗೆ ಭಯ ಮೂಡಿಸಿದೆ. ಹಿಂಬದಿಯ ಸವಾರರು ಧರಿಸದಿರಲು ಹಲವಾರು ಕಾರಣಗಳಿವೆ. ಕೇಳಿಸಿಕೊಳ್ಳಲು ಯಾರೂ ಸಿದ್ಧರಿಲ್ಲ. ಅಪಘಾತಗಳು ಸಂಭವಿಸಿದಾಗ ತಲೆಯ ಸುರಕ್ಷತೆಯನ್ನು ಗಮನಿಸಿ ಸರ್ವೋಚ್ಛ ನ್ಯಾಯಾಲಯ ಹೊರಡಿಸಿರುವ ಆದೇಶ ಸ್ವಾಗತಾರ್ಹ.
ಅಪಘಾತಗಳೇ ಸಂಭವಿಸದಂತೆ ಸುರಕ್ಷಿತ ರಸ್ತೆಗಳು ಮತ್ತು ಇತರೆ ಸೌಕರ್ಯಗಳನ್ನು ಸವಾರರಿಗೆ ಒದಗಿಸಬೇಕೆಂದು ಕಡ್ಡಾಯ ಮಾಡಿದ್ದರೆ ಚೆನ್ನಾಗಿತ್ತು. ನ್ಯಾಯಾಲಯದ ಆದೇಶವನ್ನೇ ಆಧಾರವಾಗಿಟ್ಟುಕೊಂಡು ದಾಖಲೆ ನಿರ್ಮಿಸುವಂತೆ ದಂಡವಸೂಲಿ, ಚಾಲನಾ ಪರವಾನಗಿ ಮುಟ್ಟುಗೋಲಿನಂತಹ ಕ್ರಮ ಕೈಗೊಳ್ಳುವುದು ದ್ವಿಚಕ್ರವಾಹನ ಸವಾರರಿಗೆ ಮುಖ್ಯವಾಗಿ ಬಡವರು, ಹಿಂದುಳಿದವರಿಗೆ ತೊಂದರೆಯಾಗಿದೆ.
ಅಧಿಕಾರಿಗಳು ಬಳಸುವ ಸರ್ಕಾರಿ ಐಶಾರಾಮಿ ವಾಹನಗಳು ಕಚೇರಿ ಕೆಲಸಗಳಿಗೆ ಸೀಮಿತವಲ್ಲದೆ, ಮಕ್ಕಳನ್ನು ಶಾಲೆಗೆ ಬಿಡುವುದು, ಅಂಗಡಿ–ಮಾಲುಗಳಿಗೆ ಸ್ವಂತಕ್ಕೆ ಬಳಸುವುದು ಘೋರ ಅಪರಾಧ ಎಂದೇಕೆ ಪರಿಗಣಿಸಬಾರದು.
ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಹಿಂಬದಿಯ ಸವಾರರೇನು ಮುಂಬದಿಯ ಸವಾರರೂ ಹೆಲ್ಮೆಟ್ ಧರಿಸದೆ ಚಾಲನೆ ಮಾಡುವುದು ಸಾಮಾನ್ಯ. ನ್ಯಾಯಾಲಯದ ಆದೇಶವನ್ನು ಬದಲಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ಬಳಸುವುದರ ಮೇಲೆ ರಿಯಾಯತಿ ತೋರಿಸಿ ಬಡಪಾಯಿ ದ್ವಿಚಕ್ರವಾಹನ ಸವಾರರಿಗೆ ಕರುಣೆ ತೋರಿಸುವರೆ?