ಮುಂಬೈ (ಪಿಟಿಐ): ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆ ಕೂಗುವುದಿಲ್ಲ ಎಂದು ಆಲ್ ಇಂಡಿಯಾ ಮಜ್ಲೀಸ್ ಇತ್ತೆಹಾದುಲ್ ಮುಸ್ಲಿಮಿನ್ (ಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಹೇಳುವ ಮೂಲಕ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಿರುಗೇಟು ನೀಡಿದ್ದಾರೆ.
ಹೊಸ ತಲೆಮಾರಿನ ಜನರಿಗೆ ದೇಶಭಕ್ತಿಯನ್ನು ಪ್ರೇರೇಪಿಸುವ ಘೋಷಣೆಗಳನ್ನು ಮೊಳಗಿಸುವಂತೆ ಪಾಠ ಮಾಡಬೇಕಾದ ಅಗತ್ಯವಿದೆ ಎಂದು ಭಾಗವತ್ ಹೇಳಿದ್ದಕ್ಕೆ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.
‘ನಾನು ದೇಶಭಕ್ತಿಯ ಘೋಷಣೆ ಕೂಗುವುದಿಲ್ಲ.ನೀವು ಏನು ಮಾಡಿಕೊಳ್ಳುತ್ತೀರಿ ಭಾಗವತ್ ಸಾಹಿಬ್’ ಎಂದು ವ್ಯಂಗ್ಯವಾಡಿದ್ದಾರೆ.
ಲಾತೂರ್ ಜಿಲ್ಲೆಯಲ್ಲಿ ಸೋಮವಾರ ನಡೆದ ಸಾರ್ವಜನಿಕ ರ್್ಯಾಲಿಯಲ್ಲಿ ಓವೈಸಿ ಮಾತನಾಡಿದ್ದಾರೆ.
ನವದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ದೇಶ ವಿರೋಧಿ ಘೋಷಣೆ ವಿವಾದದ ಕಾರಣ ಭಾಗವತ್ ಅವರು ಮಾರ್ಚ್ 3ರಂದು ಮಾತನಾಡಿದ್ದರು. ಹೊಸ ತಲೆಮಾರಿನ ಜನರಿಗೆ ದೇಶಭಕ್ತಿಯ ಬಗ್ಗೆ ತಿಳಿಸಿ ಹೇಳಬೇಕಾದ ಅಗತ್ಯವಿದೆಎಂದು ಹೇಳಿದ್ದರು.
ಪಾಕಿಸ್ತಾನಕ್ಕೆ ಹೋಗಲಿ: ಭಾರತ್ ಮಾತಾ ಕೀ ಜೈ ಎಂದು ಹೇಳಲು ಇಷ್ಟ ಇಲ್ಲದಿದ್ದರೆ ಓವೈಸಿ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಶಿವಸೇನಾ ಮುಖಂಡ ರಾಮದಾಸ ಕದಂ ಹೇಳಿದ್ದಾರೆ.