ಉಡುಪಿ : ರಾಜ್ಯ ಸರ್ಕಾರ ಮತ್ತು ಉಡುಪಿ ಜಿಲ್ಲಾಡಳಿತದ ಬೇಜವಬ್ದಾರಿ ಮರಳು ನೀತಿಯನ್ನು ವಿರೋಧಿಸಿ ಹಾಗೂ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಮಾರ್ಚ್ 16ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪರಿಷತ್ತಿನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್ ಝಡ್) 18 ಮರಳು ಬ್ಲಾಕ್ಗಳನ್ನು ಗುರುತಿಸಿ ಈ ಹಿಂದೆ ಪರವಾನಗಿ ನೀಡಿದ್ದರೂ, ಜಿಲ್ಲಾಡಳಿತ ಪರವಾನಗಿ ಗಳನ್ನು ಸಕಾಲದಲ್ಲಿ ನವೀಕರಣ ಮಾಡಲು ಕ್ರಮ ಕೈಗೊಂಡಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತವಾಗಿದೆ. ಅಲ್ಲದೆ, ನಾನ್ ಸಿಆರ್ಝಡ್ ವ್ಯಾಪ್ತಿ ಯಲ್ಲಿ ಬರುವ 11 ಮರಳು ಬ್ಲಾಕ್ಗಳಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಮರಳುಗಾರಿಕೆ ಮಾಡುವ ಪ್ರಸ್ತಾವನೆಗೆ ಇಲಾಖೆಯ ಹೊಂದಾ ಣಿಕೆಯ ಕೊರತೆಯಿಂದ ಮಂಜೂರಾತಿ ದೊರಕಿಲ್ಲ. ಒಟ್ಟಾರೆಯಾಗಿ ಕರಾವಳಿ ಜಿಲ್ಲೆಯಾದ್ಯಂತ ಉದ್ಭವಿಸಿರುವ ಮರ ಳಿನ ಸಮಸ್ಯೆಯ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.
ಸರ್ಕಾರ ಸಮರ್ಪಕವಾದ ಮರಳು ನೀತಿಯನ್ನು ಅನುಷ್ಠಾನ ಗೊಳಿಸದಿರು ವುದರಿಂದ ಕರಾವಳಿ ಜಿಲ್ಲೆಯಾದ್ಯಂತ ತೀವ್ರ ಮರಳಿನ ಕೊರತೆ ಉಂಟಾಗಿದೆ. ಮರಳು ಸಿಗದೇ ಬಡವರ ಆಶ್ರಯ, ಬಸವ ವಸತಿ ಮನೆಗಳು, ಸಾಮಾನ್ಯ ಜನರ ಶೌಚಾಲಯ, ಗ್ರಾಮೀಣ ರಸ್ತೆ ಗಳು, ಕಟ್ಟಡ ನಿರ್ಮಾಣ ಕಾಮಗಾರಿ ಗಳು ಸೇರಿದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳೇ ಸ್ಥಗಿತವಾಗಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಡುಪಿ ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಕಿಣಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಸೇರಿದಂತೆ ಇತರರು ಇದ್ದರು.