ಶ್ರೀನೋಟ
ಕುವೆಂಪು ಅವರು ‘ಮನೆಯ ಉದ್ಯಾನದಲ್ಲಿ ಆಶ್ವೀಜಮಾಸದ ಪ್ರಾತಃಸಮಯದ ಹೊಂಬಿಸಿಲಿನಲ್ಲಿ ಹಸುರು ಹೂವುಗಳ ವೈಭವವನ್ನು ಸವಿಯುತ್ತಿರುವಾಗ ಉಂಟಾದ ಅನುಭವ’ವನ್ನು ‘ಕಣ್ಣು’ ಕವನದಲ್ಲಿ ಭವ್ಯವಾಗಿ ಚಿತ್ರಿಸಿದ್ದಾರೆ. ಹೂವು ಸೌಂದರ್ಯದೊಂದಿಗೆ ನಿರ್ಮಲವಾಗಿರುತ್ತದೆ. ಅದು ತನ್ನ ಕಂಪಿನೊಂದಿಗೆ ಆನಂದವನ್ನುಣಿಸುತ್ತದೆ. ಅವರು ಭಗವಂತನ ಕೃಪೆಯ ಈ ಕಣ್ಣು ಹೂದೋಟದ ‘ಶ್ರೀನೋಟ’ವನ್ನು ಸವಿಯುತ್ತಿದೆ ಎಂದು ನವೀನ ಪದದಿಂದ ತಾವು ಕಂಡ ಆನಂದಾನುಭೂತಿಯನ್ನು ಅಭಿವ್ಯಕ್ತಿಸಿದ್ದಾರೆ.
ಎಂತಹ ಕೃಪೆ ಈ ಕಣ್ಣು
ಹೂದೋಟದ ಶ್ರೀನೋಟವ ಸವಿಯುತ್ತಿಹ ಈ ಕಣ್ಣು!
ಸೌಂದರ್ಯಯಾಜಿ
ಕುವೆಂಪು ಅವರು ತಮ್ಮ ‘ಉದಯರವಿ’ ಮನೆಯ ಉದ್ಯಾನದಲ್ಲಿ ಕಂಪುಸೂಸಿ ಕಂಗೊಳಿಸುತ್ತಿರುವ ಸೂರ್ಯಕಾಂತಿ, ಗುಲಾಬಿ, ಜರ್ಬರಾ, ಮ್ಯಾಗ್ನೋಲಿಯಾ ಗ್ರಾಂಡಿಪೆÇ್ಲೀರಾ ಮುಂತಾದ ವಿವಿಧ ಬಣ್ಣದ ಹಲವು ಹೂವುಗಳ ಸೌಂದರ್ಯದ ಆರಾಧನೆಯಲ್ಲಿ ಲೀನವಾಗಿದ್ದಾರೆ. ಅವರು ಸೌಂದರ್ಯಯಜ್ಞ (ಯಾಜಿ) ದಲ್ಲಿ ಯಾಜನ (ಯಜ್ಞವನ್ನು ಮಾಡಿಸುವಿಕೆ)ರಾಗಿದ್ದಾರೆ. ‘ಸೌಂದರ್ಯಯಾಜಿ’ ಅವರ ಸೃಷ್ಟಿಯ ಪದ. ಆ ಯಜ್ಞವು ಸತ್ಯ ಶಿವ ಸೌಂದರ್ಯದ್ದಾಗಿದೆ. ಅದಕ್ಕೆ ಕೋಗಿಲೆ ಮುಂತಾದ ಪಕ್ಷಿಗಳ ಧ್ವನಿ ಕುಕಿಲುಗಳ ಕೂಜನ ಮಂಗಳವಾದ್ಯವಾಗಿದೆ. ಸ್ಪಟಿಕ ಪುಷ್ಪ ಲಾಜನ (ಬತ್ತದ ಅರಳು)ವಾಗಿದೆ. ಅವರು ಯಾಗ ನಡೆಸುತ್ತಿರುವುದು ಲೋಕಕಲ್ಯಾಣಕರವಾದ ‘ಸರ್ವಸೃಷ್ಟಿಯ ಸರ್ವಸುಖ’ಕ್ಕಾಗಿ. ಇದೊಂದು ಕವಿಯ ಹೃದಯ ಅನುಭಾವಿಸಿ ಸವಿದ ಸೌಂದರ್ಯ ರಸದ ಅಮೃತದೂಟ; ಅಲೌಕಿಕ ಸುಖ.
‘ಕೋಕಿಲಾದಿ ಕೂಜನ;
ಸ್ಫಟಿಕಪುಷ್ಪಲಾಜನ;
ಸರ್ವಸೃಷ್ಟಿಯ ಸರ್ವಸುಖಕೆ
ಸತ್ಯ ಶಿವ ಸೌಂದರ್ಯಮಖಕೆ
ಕವಿಯ ಯಾಜನ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.