ADVERTISEMENT

ನೀರ ಬಿಟ್ಟು ನೆಲದ ಮೇಲೆ ವೇಣುಗೋಪಾಲ!

ಗಣಂಗೂರು ನಂಜೇಗೌಡ
Published 15 ಜೂನ್ 2024, 22:30 IST
Last Updated 15 ಜೂನ್ 2024, 22:30 IST
ಹೊಸ ಕನ್ನಂಬಾಡಿಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ  ಚಿತ್ರಗಳು: ಗಣಂಗೂರು ನಂಜೇಗೌಡ
ಹೊಸ ಕನ್ನಂಬಾಡಿಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ  ಚಿತ್ರಗಳು: ಗಣಂಗೂರು ನಂಜೇಗೌಡ   

ಶ್ರೀರಂಗಪಟ್ಟಣ ಮತ್ತು ಆಸುಪಾಸಿನ ತಾಣಗಳಿಗೆ ಒಂದು ದಿನದ ಪ್ರವಾಸ ಕೈಗೊಳ್ಳಲು ಇಷ್ಟಪಡುವವರಿಗೆ ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮತ್ತೊಂದು ಆಕರ್ಷಣೆಯ ತಾಣವೇ ಹೊಸ ಕನ್ನಂಬಾಡಿಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ. 

ಹೊಯ್ಸಳರ ಕಾಲದ ಈ ದೇವಾಲಯ ಸುಮಾರು 70 ವರ್ಷ ಕೃಷ್ಣರಾಜಸಾಗರ (ಕೆಆರ್‌ಎಸ್‌) ಜಲಾಶಯದ ನೀರಿನಲ್ಲಿ ಮುಳುಗಿ ಹೋಗಿತ್ತು. ಈ ದೇವಾಲಯವನ್ನು 2003ರಲ್ಲಿ ಜಲಾಶಯದ ಹಿನ್ನೀರು ಪ್ರದೇಶದ ತುಸು ಎತ್ತರದ ಜಾಗಕ್ಕೆ ಮೂಲ ರಚನೆಗೆ ಧಕ್ಕೆ ಬಾರದಂತೆ ಯಥಾವತ್‌ ಸ್ಥಳಾಂತರಿಸಲಾಗಿದೆ. ಈ ಸವಾಲಿನ ಕೆಲಸವನ್ನು ಮಾಡಿದವರು ಉದ್ಯಮಿ ದಿವಂಗತ ಶ್ರೀಹರಿ ಖೋಡೆ. ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರು. ಅವರ ಆಸಕ್ತಿಯ ಫಲವಾಗಿ ಶ್ರೀಮಂತ ವಾಸ್ತುಶಿಲ್ಪ ಮತ್ತು ಪರಂಪರೆಯ ಬಹುಮುಖ್ಯ ಕುರುಹು ದಡ ಸೇರಿದೆ.

ಇದು ಈಗ ಪ್ರವಾಸಿ ತಾಣವಾಗಿದ್ದು ರಾಜ್ಯ, ಹೊರ ರಾಜ್ಯಗಳ ಪ್ರವಾಸಿಗರು ಇತ್ತ ಬರುತ್ತಿದ್ದಾರೆ. ಶ್ರೀರಂಗಪಟ್ಟಣ, ಮೈಸೂರು, ಮಡಿಕೇರಿಗೆ ಭೇಟಿ ನೀಡುವ ಪ್ರವಾಸಿಗರ ಪಟ್ಟಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಕೂಡ ಸೇರಿರುತ್ತದೆ. ದೇಗುಲದ ಬಲಕ್ಕೆ ಅಲೆಅಲೆಯಾಗಿ ತುಳುಕುವ ವಿಶಾಲ ನೀರಿನ ಹರವು, ಕೃಷ್ಣರಾಜಸಾಗರ ಅಣೆಕಟ್ಟೆಯ ನೋಟ, ಹಿನ್ನೀರ ದಡದಲ್ಲಿ ಹಸಿರು ಮುಕ್ಕಳಿಸುವ ತೋಟಗಳು ಈ ತಾಣದ ಸೊಬಗನ್ನು ಹೆಚ್ಚಿಸಿವೆ.

ADVERTISEMENT

ವರವಾದ ಬರಗಾಲ

ಜಲಾಶಯ ನಿರ್ಮಾಣ ಸಮಯದಲ್ಲಿ (1911–1931)ಸ್ಥಳಾಂತರ ಮಾಡಲು ಸಾಧ್ಯವಾಗದೆ ಬಿಟ್ಟ ದೇವಾಲಯಗಳಲ್ಲಿ ವೇಣುಗೋ‍ಪಾಲಸ್ವಾಮಿ ದೇವಾಲಯ ಪ್ರಮುಖವಾದುದು. 2001–2003ರ ಅವಧಿಯಲ್ಲಿ ತೀವ್ರ ಬರಗಾಲ ಎದುರಾಗಿತ್ತು. ಪರಿಣಾಮ ಇಡೀ ಜಲಾಶಯ ಬರಿದಾಯಿತು. ಈ ಜಲಾಶಯ ಗರಿಷ್ಟ ಮಟ್ಟ 124.80 ಅಡಿಗಳು. ಈ ದೇವಾಲಯ 60 ಅಡಿ ಆಳದಲ್ಲಿ ಇತ್ತು. ಜಲಾಶಯ ಬತ್ತಿ ಹೋದದ್ದರಿಂದ ಸ್ಪಷ್ಟವಾಗಿ ಗೋಚರಿಸಿತು. ರಾಜ್ಯದ ವಿವಿಧೆಡೆಗಳಿಂದ ತಂಡೋಪತಂಡವಾಗಿ ಜನರು ಬಂದು ವೀಕ್ಷಿಸಿದರು. ದೇವಾಲಯದ ಮೇಲೆ ಹತ್ತಿ ಇಳಿದರು. ಸಿನಿಮಾ ಮಂದಿ ಧಾವಿಸಿ ಬಂದು ಚಿತ್ರೀಕರಣ ನಡೆಸಿದರು. ಆದರೆ ಈ ದೇವಾಲಯ ಉದ್ಯಮಿ ಶ್ರೀಹರಿ ಖೋಡೆ ಅವರ ಕಣ್ಣಿಗೆ ಅಮೂಲ್ಯ ಸಂಪತ್ತಿನಂತೆ ಕಂಡಿತು. ಸರ್ಕಾರದ ಜತೆ ಮಾತುಕತೆ ನಡೆಸಿ ಸ್ಥಳಾಂತರಿಸಲು ಒಪ್ಪಿಗೆ ಪಡೆದರು. ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ನಾಲ್ಕಾರು ಎಕರೆ ಜಮೀನು ಖರೀದಿಸಿ, ಶ್ರೀಹರಿ ಖೋಡೆ ಫೌಂಡೇಶನ್‌ ಹೆಸರಿನಲ್ಲಿ ದೇವಾಲಯವನ್ನು ಪುನರುಜ್ಜೀವನಗೊಳಿಸಿದರು.

ಸ್ಥಳಾಂತರಗೊಂಡ ಬಗೆ

2003ರಲ್ಲಿ ದೇವಾಲಯ ಸ್ಥಳಾಂತರ ಪ್ರಕ್ರಿಯೆ ಆರಂಭವಾಯಿತು. ಐತಿಹಾಸಿಕ ದೇಗುಲದ ಮೂಲ ಸ್ವರೂಪದಂತೆಯೇ ಪುನರುಜ್ಜೀವನ ಮಾಡಬೇಕು ಎಂಬ ಕಾರಣಕ್ಕೆ ಒಂದೊಂದು ಕಲ್ಲಿಗೂ ನಂಬರ್‌ ಹಾಕಿದರು. ಈ ಮೊದಲೇ ಸಿದ್ದಪಡಿಸಿಕೊಂಡಿದ್ದ ನಕ್ಷೆಯ ಸ್ಥಳಕ್ಕೆ ಅವುಗಳನ್ನು ತಂದು ಹಾಕಲಾಯಿತು. ಕೇವಲ 13 ದಿನಗಳಲ್ಲಿ ದೇವಾಲಯದ ಅಷ್ಟೂ ಅವಶೇಷಗಳು ಬರಿದಾದ ಜಲಾಶಯದ ಒಡಲಿನಿಂದ ದಡಕ್ಕೆ ಬಂದು ಬಿದ್ದವು. ಹದಿನಾಲ್ಕು ಕ್ರೇನ್‌ಗಳು, ನಾಲ್ಕು ಜೆಸಿಬಿಗಳು ಮತ್ತು ಎಂಬತ್ತು ಟ್ರ‍್ಯಾಕ್ಟರ್‌ಗಳ ಸಹಾಯದಿಂದ ಒಂದೊಂದೇ ಕಲ್ಲು ಚಪ್ಪಡಿಗಳನ್ನು ನಿಗದಿತ ಜಾಗಕ್ಕೆ ಸ್ಥಳಾಂತರಿಸಲಾಯಿತು. 2003ರಲ್ಲಿ ಆರಂಭವಾದ ದೇವಾಲಯದ ಪುನರುಜ್ಜೀವನ ಕಾರ್ಯ 2017 ರಲ್ಲಿ ಪೂರ್ಣಗೊಂಡಿತು.

ತಮಿಳುನಾಡು ಮತ್ತು ಆಂಧ್ರಪ್ರದೇಶದ 300 ರಿಂದ 400 ಮಂದಿ ಕಾರ್ಮಿಕರು ಹದಿನಾಲ್ಕು ವರ್ಷ  ಅವಿರತವಾಗಿ ದುಡಿದ ಫಲವಾಗಿ ದೇವಾಲಯ ಮತ್ತೆ ಜೀವ ತಳೆಯಿತು. ನಕ್ಷತ್ರಾಕಾರದ ಜಗತಿಯ ಮೇಲೆ ಗರ್ಭಗುಡಿ, ಸುಖನಾಶಿ, ನವರಂಗ, ಪಾತಾಳಾಂಕಣ, ಮುಖ ಮಂಟಪ, ಗರುಡಗಂಬ, ಸುತ್ತಾಲಯ, ಮಹಾದ್ವಾರ ಸಹಿತ ದೇವಾಲಯ ಹೊಯ್ಸಳ ಶೈಲಿಯಲ್ಲಿಯೇ ಮೈದಳೆದಿದೆ. ವೇಣುಗೋಪಾಲಸ್ವಾಮಿಯ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಈ ದೇಗುಲ ಜಲಾಶಯದಲ್ಲಿ ಮುಳುಗುವ ಮುನ್ನ ಇದ್ದ ವಿಗ್ರಹ ಪಾಂಡವಪುರ ತಾಲ್ಲೂಕಿನ ನಾರ್ತ್‌ಬ್ಯಾಂಕ್‌ ಎಂಬ ಗ್ರಾಮದಲ್ಲಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಟ್ಟಿಸಿಕೊಟ್ಟಿರುವ ಇದೇ ಹೆಸರಿನ ದೇವಾಲಯದಲ್ಲಿದೆ. ದೇಗುಲದ ಪುನರ್‌ ನಿರ್ಮಾಣದಲ್ಲಿ 70ರಷ್ಟು ಮೂಲ ದೇವಾಲಯದ ಶಿಲೆಗಳನ್ನು ಬಳಸಿದ್ದು, ಗರುಡಗಂಬ ಸೇರಿದಂತೆ ಶೇಕಡ 30ರಷ್ಟು ಹೊಸ ಕಲ್ಲುಗಳನ್ನು ಬಳಸಲಾಗಿದೆ. ದೇವಾಯದ ಮುಂದೆ ಹಂಪಿಯ ಕಲ್ಲಿನ ರಥದ ಮಾದರಿ, ಮಂಟಪಗಳು ಮತ್ತು ತುಳಸಿ ಉದ್ಯಾನವನ ಗಮನ ಸೆಳೆಯುತ್ತವೆ.

ಆರೇಳು ಎಕರೆ ಪ್ರದೇಶದ ನಡುವೆ ವೇಣುಗೋಪಾಲಸ್ವಾಮಿ ದೇವಾಲಯ ಇದ್ದು, ವಾರದ ಎಲ್ಲ ದಿನವೂ ಬೆಳಿಗ್ಗೆ 9ರಿಂದ ಸಂಜೆ 6.30ರ ವರೆಗೆ ತೆರೆದಿರುತ್ತದೆ. ಶ್ರೀಹರಿ ಖೋಡೆ ಫೌಂಡೇಶನ್‌ ನಿಯೋಜಿಸಿರುವ ಅರ್ಚಕರು ದಿನದಲ್ಲಿ ಎರಡು ಬಾರಿ ವೇಣುಗೋಪಾಲಸ್ವಾಮಿ ಮತ್ತು ಪ್ರಾಕಾರದ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಇತರರಿಗೆ ಇಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ಯಾವುದೇ ಪ್ರವೇಶ ಶುಲ್ಕ ಮತ್ತು ವಾಹನ ಪಾರ್ಕಿಂಗ್‌ ಶುಲ್ಕವಿಲ್ಲ.

ಬೆಂಗಳೂರಿನಿಂದ ಬಂದಿದ್ದ ರಾಕೇಶ್‌ ಮತ್ತು ಸುಪ್ರಿಯಾ ದಂಪತಿಯನ್ನು ಮಾತಿಗೆಳೆದಾಗ...
‘ವೇಣುಗೋಪಾಲಸ್ವಾಮಿ ದೇವಾಲಯ ಇರುವ ಜಾಗ ವಿಹಾರ ತಾಣ ಮಾತ್ರವಲ್ಲದೆ ಶ್ರದ್ಧಾ ಕೇಂದ್ರವೂ ಹೌದು. ಎರಡು ಮೂರು ತಾಸು ಇಲ್ಲಿದ್ದರೆ ಮೈ ಮನ ಹಗುರಾಗುತ್ತವೆ. ಆದರೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಕಲ್ಲು ಮಣ್ಣಿನಿಂದ ಕೂಡಿದೆ. ಮುಖ್ಯರಸ್ತೆಯಿಂದ ದೇವಾಲಯದ ವರೆಗೆ ಎರಡು ಕಿಲೊಮೀಟರ್‌ ಕ್ರಮಿಸುವಷ್ಟರಲ್ಲಿ 10 ಕಿಲೊಮೀಟರ್‌ ಕ್ರಮಿಸಿದ ಅನುಭವಾಯಿತು. ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದರು.

ಮಾರ್ಗ: ಶ್ರೀರಂಗಪಟ್ಟಣ–ಬೀದರ್‌ ಹೆದ್ದಾರಿಯಲ್ಲಿ ಎಲೆಕೆರೆ ಹ್ಯಾಂಡ್‌ಪೋಸ್ಟ್‌ ಬಳಿ ಎಡಕ್ಕೆ ತಿರುವು ಪಡೆದು ಭೂ ವರಾಹನಾಥ ಕಲ್ಲಹಳ್ಳಿ ಮಾರ್ಗದಲ್ಲಿ ತೆರಳಿದರೆ ಹೊಸ ಕನ್ನಂಬಾಡಿ ಗ್ರಾಮದ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಎರಡು ಕಿಲೊಮೀಟರ್‌ ಕ್ರಮಿಸಿದರೆ ವೇಣುಗೋಪಾಲಸ್ವಾಮಿ ದೇವಾಲಯ ಸಿಗುತ್ತದೆ. ಇದು ಬೆಂಗಳೂರಿನಿಂದ 147 ಕಿಲೊಮೀಟರ್‌, ಮೈಸೂರಿನಿಂದ 28 ಕಿಲೊಮೀಟರ್‌, ಮಂಡ್ಯದಿಂದ 46 ಕಿಲೊಮೀಟರ್‌ ದೂರದಲ್ಲಿದೆ. ಕೆಆರ್‌ಎಸ್‌ ಬೃಂದಾವನದಿಂದ 8 ಕಿಲೊಮೀಟರ್‌ ಅಂತರದಲ್ಲಿದೆ.

ದೇಗುಲದ ಐತಿಹ್ಯ

ಹೊಯ್ಸಳರ ದೊರೆ ವಿಷ್ಣುವರ್ಧನನ ನಂತರದ ದೊರೆಗಳ ಕಾಲದಲ್ಲಿ ನಿರ್ಮಾಣವಾಗಿದ್ದ ತ್ರಿಕೂಟಾಚಲ ದೇಗುಲ. ಕನ್ನಂಬಾಡಿ ಗ್ರಾಮ 12ನೇ ಶತಮಾನದಲ್ಲಿ ಮಹಾ ಅಗ್ರಹಾರವಾಗಿದ್ದು, ಕಾಮೆಯ ದಣ್ಣಾಯಕ ಎಂಬಾತನು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಎಂದು ದೇಗುಲದ ಯಾಗಶಾಲೆಯ ಮೇಲ್ಛಾವಣಿ ಶಾಸನ ತಿಳಿಸಿದೆ. ಹೊರ ಬಿತ್ತಿಯ ಮೇಲಿರುವ 14ನೇ ಶತಮಾನದ ಶಾಸನದಲ್ಲಿ ಪಟ್ಟನೋಜನ ಮಗ ಚಿಕ್ಕಬಾಚೆಯ ಎಂಬಾತನು ಮಂಟಪವೊಂದನ್ನು ಕಟ್ಟಿಸಿದ ಉಲ್ಲೇಖವಿದೆ. ಶಂಕರನಾಯಕ ಎಂಬಾತನು ಈ ದೇವಾಲಯಕ್ಕೆ ಜಮೀನು ದತ್ತಿ ಬಿಟ್ಟ ವಿಚಾರವನ್ನು ದಕ್ಷಿಣ ಮಂಟಪದ ಒಂದನೇ ಕಲ್ಲಿನ ಕಂಬದ ಮೇಲಿರುವ 14ನೇ ಶತಮಾನದ ಶಾಸನ ಹೇಳುತ್ತದೆ. (ಕ್ರಿ.ಶ.1722ರ ನ,22ರಲ್ಲಿ) ಬರೆದಿರುವ ತಾಮ್ರ ಶಾಸನವು, ಬಿಳುಗುಲಿ ಗೋಪೈಯನವರ ಮಗ ದೇವರಾಜಯ್ಯನು ಗೋಪಾಲಕೃಷ್ಣ ದೇವರ ಹೆಸರಿನಲ್ಲಿ ಜಮೀನು ದಾನ ನೀಡಿದ ಸಂಗತಿ ತಿಳಿಸುತ್ತದೆ.

ಕೆಆರ್‌ಎಸ್‌ ಜಲಾಶಯದೊಳಗಿದ್ದ ವೇಣುಗೋಪಾಲಸ್ವಾಮಿ ದೇವಾಲಯ

ದೇಗುಲದ ಐತಿಹ್ಯ ಹೊಯ್ಸಳರ ದೊರೆ ವಿಷ್ಣುವರ್ಧನನ ನಂತರದ ದೊರೆಗಳ ಕಾಲದಲ್ಲಿ ನಿರ್ಮಾಣವಾಗಿದ್ದ ತ್ರಿಕೂಟಾಚಲ ದೇಗುಲ. ಕನ್ನಂಬಾಡಿ ಗ್ರಾಮ 12ನೇ ಶತಮಾನದಲ್ಲಿ ಮಹಾ ಅಗ್ರಹಾರವಾಗಿದ್ದು ಕಾಮೆಯ ದಣ್ಣಾಯಕ ಎಂಬಾತನು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಎಂದು ದೇಗುಲದ ಯಾಗಶಾಲೆಯ ಮೇಲ್ಛಾವಣಿ ಶಾಸನ ತಿಳಿಸಿದೆ. ಹೊರ ಬಿತ್ತಿಯ ಮೇಲಿರುವ 14ನೇ ಶತಮಾನದ ಶಾಸನದಲ್ಲಿ ಪಟ್ಟನೋಜನ ಮಗ ಚಿಕ್ಕಬಾಚೆಯ ಎಂಬಾತನು ಮಂಟಪವೊಂದನ್ನು ಕಟ್ಟಿಸಿದ ಉಲ್ಲೇಖವಿದೆ. ಶಂಕರನಾಯಕ ಎಂಬಾತನು ಈ ದೇವಾಲಯಕ್ಕೆ ಜಮೀನು ದತ್ತಿ ಬಿಟ್ಟ ವಿಚಾರವನ್ನು ದಕ್ಷಿಣ ಮಂಟಪದ ಒಂದನೇ ಕಲ್ಲಿನ ಕಂಬದ ಮೇಲಿರುವ 14ನೇ ಶತಮಾನದ ಶಾಸನ ಹೇಳುತ್ತದೆ. (ಕ್ರಿ.ಶ.1722ರ ನ22ರಲ್ಲಿ) ಬರೆದಿರುವ ತಾಮ್ರ ಶಾಸನವು ಬಿಳುಗುಲಿ ಗೋಪೈಯನವರ ಮಗ ದೇವರಾಜಯ್ಯನು ಗೋಪಾಲಕೃಷ್ಣ ದೇವರ ಹೆಸರಿನಲ್ಲಿ ಜಮೀನು ದಾನ ನೀಡಿದ ಸಂಗತಿ ತಿಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.