ತಿಳಿವಿನಸಿ
ಹನುಮಂತನು ಸಮುದ್ರವನ್ನು ಲಂಘಿಸಲು ಮಹೇಂದ್ರಾಚಲ ಶೃಂಗದಿಂದ ಚಿಮ್ಮಿದನು. ಅವನು ತದೇಕಚಿತ್ತನಾಗಿ ಸಾಗುತ್ತಿದ್ದುದನ್ನು ಕುವೆಂಪು ಅವರು ಹೀಗೆ ಚಿತ್ರಿಸಿದ್ದಾರೆ:
‘ತಿಳಿವಿನಸಿಯಲಿ ಮಾಯೆಯನು ಕಡಿಕಡಿದು ನುಗ್ಗುವ ಯೋಗಿಯೊ?’
(ಸಮುದ್ರ ಲಂಘನ – ಖಂಡಕಾವ್ಯ)
ಅದರಲ್ಲಿ ಜ್ಞಾನದ ಅರಿವಿಗೆ ಒಳಗಾದ ‘ತಿಳಿವಿನಸಿ’ (ಅಸಿ=ಕತ್ತಿ) ತಿಳಿವಿನ ಕತ್ತಿಯಿಂದ ಮಾಯೆಯನ್ನು ಕಡಿಕಡಿದು ಮುನ್ನುಗಿದ ಯೋಗಿ ಆಂಜನೇಯನನ್ನು ಬಣ್ಣಿಸಿರುವ ರೀತಿ ಅನನ್ಯವಾಗಿದೆ
ಮೌಢ್ಯಮೇಧ
ಪುರೋಹಿತಶಾಹಿ ವ್ಯವಸ್ಥೆಯು ಅಷ್ಟ್ರಗ್ರಹ ನಿವಾರಣೆಗಾಗಿ ಯಜ್ಞಯಾಗಾದಿಗಳನ್ನು ನಡೆಸಿ ಜನರನ್ನು ಮೂಢರನ್ನಾಗಿಸುತ್ತಿತ್ತು. ಆ ಸಂದರ್ಭದಲ್ಲಿ 9-1-1962 ರಂದು ಕುವೆಂಪು ಅವರು ಜನರನ್ನು ವೈಜ್ಞಾನಿಕ ವಿಶ್ಲೇಷಣೆಯಲ್ಲಿ ವೈಚಾರಿಕವಾಗಿ ಚಿಂತಿಸಿ ಎಂದು ಹೇಳುತ್ತ ಜಾಗೃತಗೊಳಿಸಲು ರಚಿಸಿದ ಕವನ ‘ಮೌಢ್ಯಮೇಧ’ (ಮೇಧ=ಯಾಗ, ಯಜ್ಞ). ಧರ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ಭೀತರನ್ನಾಗಿಸಿ ಸುಲಿಯುವ ವ್ಯವಸ್ಥೆಯೇ ಇದು. ಮೂಢತನ, ತಿಳಿಗೇಡಿತನವನ್ನು ಬಂಡವಾಳ ಮಾಡಿಕೊಂಡು ನಾಜೂಕಾಗಿ ಶೋಷಿಸುವ ಪುರೋಹಿತಶಾಹಿ ಹುನ್ನಾರ ಎಂದು ಕ್ರಾಂತಿಕಾರಿ ನುಡಿಗಳಲ್ಲಿ ಯಜ್ಞಾದಿಗಳನ್ನು ‘ಮೌಢ್ಯಮೇಧ’ ಪದ ರೂಪಿಸಿ ಖಂಡಿಸಿದರು.
‘ಎತ್ತಿ ಋತ್ವಿಕ್ಕರನು ಎಸೆ ಹೋಮ ಕುಂಡಕ್ಕೆ
ಅಷ್ಟಗ್ರಹಕೂಟ ದೋಷ ಪರಿಹಾರಕ್ಕೆ
(ಮೌಢ್ಯಮೇಧ - ಪ್ರೇತ-ಕ್ಯೂ)
ಕುವೆಂಪು ಅವರು ಮತ್ತೆ 29-1-1962ರಂದು ‘ಅಷ್ಟಗ್ರಹ ಯೋಗ ಸಿದ್ಧಿ’ ಕವನ ರಚಿಸಿ, ಲಾಭವನ್ನು ಪಡೆಯುವವರ ಯುಕ್ತಿಯನ್ನು ಹೀಗೆ ಛೇಡಿಸಿದ್ದಾರೆ:
‘ಮಂಕು ಮಂದಿಗೆ ಮೌಢ್ಯಮದ್ಯವನ್ನು ಕುಡಿಸಿರಯ್;
ಸುಳ್ಳು ಭಯವನು ಬಿತ್ತಿ ಚೆನ್ನಾಗಿ ದುಡಿಸಿರಯ್’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.