ಹಸೆ ಚಿತ್ತಾರವೆಂಬ ಕಲಾ ಪ್ರಕಾರವೊಂದು ಮಲೆನಾಡಿನ ಅಂಚಿನ ಸಮುದಾಯಗಳಲ್ಲಿ ಹಾಸು ಹೊಕ್ಕಾಗಿದೆ. ಸಾವಿರಾರು ವರ್ಷಗಳ ಬೆಟ್ಟಗಳ ಗುಹೆಗಳಲಿ, ಬಂಡೆಗಳ ಮೇಲೆ ಮೈದಳೆದುನಿಂತಿರುವ ಪ್ರಾಚೀನ ಮಾನವರ ಚಿತ್ತಾರದ ಮುಂದುವರಿದ ರೂಪವೇ ಈ ಹಸೆ ಚಿತ್ತಾರ.
ಮಲೆನಾಡಿನ ದೀವರೂ ಸೇರಿದಂತೆ ಆದಿಮ ಸಮುದಾಯಗಳ ಮದುವೆ ಸಮಾರಂಭದ ವೇಳೆ ಬರೆಯುವ ಈ ಚಿತ್ತಾರವು ಕೇವಲ ಚಿತ್ತಾರವಾಗಿ ಉಳಿಯದೆ ಅವರ ಬದುಕಿನ ವೈವಿದ್ಯಮಯ ಸಂತೋಷ ಹಾಗೂ ಸಂಕಟ, ಹಸಿವು, ವರ್ಣರಂಜಿತ ಬದುಕಿನ ಅಭಿವ್ಯಕ್ತಿಯಾಗಿ ಕಾಣುತ್ತದೆ.
ಆಧುನಿಕತೆಯ ಕಾಲದಲ್ಲಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇಂತಹ ಕಲೆಯ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಮೋಹನಚಂದ್ರಗುತ್ತಿ ಅತ್ಯಂತ ಆಳವಾದ ಅಧ್ಯಯನವನ್ನು ಮಾಡಿ ಈ ಕೃತಿಯನ್ನು ಹೊರತಂದಿದ್ದಾರೆ.
ಹತ್ತುವರ್ಷಗಳ ನಿರಂತರ ಸಂಶೋಧನೆಯ ಫಲವೇ ಈ ಕೃತಿ. ಆದಿಮ ಕಾಲ ಪರಂಪರೆಯ ಬೇರುಗಳಿಂದ ಹಿಡಿದು ಆಧುನಿಕ ಸಂದರ್ಭದಲ್ಲಿ ಉಂಟಾಗಿರುವ ಪಲ್ಲಟಗಳನ್ನೂ ಈ ಕೃತಿಯಲ್ಲಿ ವಿವರಿಸಿದ್ದಾರೆ. ಇದರ ಜತೆಗೆ ಕಲಾವಿದರನ್ನೂ ಪರಿಚಯ ಮಾಡಿಕೊಟ್ಟಿದ್ದಾರೆ. ಕಲಾವಿದರ ಸೂಚಿಯನ್ನು ನೀಡುವುದರ ಮೂಲಕ ಸಮುದಾಯದ ಸಂಕಥನವಾಗಿ ಈ ಕೃತಿ ಮೂಡಿಬಂದಿದೆ.
ಚಿತ್ತಾರವೊಂದು ಆದಿಮ ಕಾಲದಲ್ಲಿ ತಾಂತ್ರಿಕವಾಗಿ ಬಳಕೆಯಾಗುತ್ತಿದ್ದುದರಿಂದ ಹಿಡಿದು ಇತ್ತೀಚಿನ ಭಿನ್ನ ರೀತಿಯ ಅನುಸಂದಾನವನ್ನು ಈ ಕೃತಿಯಲ್ಲಿ ತಾರ್ಕಿಕವಾಗಿ ಮಂಡಿಸಲಾಗಿದೆ. ಸಂಶೋಧನಾ ವಿಧ್ಯಾರ್ಥಿಗಳಿಗೆ ಎಷ್ಟು ಉಪಯುಕ್ತವೋ ಕಲಾವಿದರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಬರೆದಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
ಹಸೆ ಚಿತ್ತಾರ
ಲೇ: ಡಾ.ಮೋಹನ್ ಚಂದ್ರಗುತ್ತಿ
ಪ್ರ: ಸುವ್ವಿ ಪ್ರಕಾಶನ
ಸಂ: 9480544099
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.