ಹೈದರಾಬಾದ್ ಕರ್ನಾಟಕ ಭಾಷಾ ಸೊಗಡು ವೈವಿಧ್ಯಮಯವಾಗಿದೆ. ಬಳ್ಳಾರಿ ಸೀಮೆಯ ಭಾಷೆಯೆಂದರೆ ಆನೆಪಾ ಒಂಟ್ಯಾ ಅಂತಿದ್ರು. ಏನಪ್ಪಾ ಹೊರಟೆಯಾ ಅಂತ ಉಭಯಕುಶಲೋಪರಿಯ ವಿಧ ಅದು. ಅದೇ ಭಾಷಾ ಸೊಗಡನ್ನು ಇರಿಸಿಕೊಂಡು ಕಥೆ ಹೆಣೆದಿದ್ದಾರೆ ಪ್ರವೀಣ್ ಕುಮಾರ್ ಜಿ. ನಮ್ಮ ನೆಲದ, ಸಂಸ್ಕೃತಿಯೊಂದಿಗೆ ಭಾಷಾ ವೈವಿಧ್ಯವನ್ನು ಗುರುತಿಸಿ, ದಾಖಲಿಸುವ ಕೆಲಸದಲ್ಲಿ ಈ ಪುಸ್ತಕ ಬಳ್ಳಾರಿ ಕನ್ನಡವನ್ನು ಸಶಕ್ತವಾಗಿ ಹಿಡಿದಿರಿಸಿದೆ.
ಜಾತಿ, ಲಿಂಗತಾರತಮ್ಯ, ಬಾಲ್ಯವಿವಾಹ, ಮೌಢ್ಯ ಮತ್ತು ಕೋಮು ವಿಷಯಗಳನ್ನು ಕಥಾ ಹಂದರದಲ್ಲಿ ಬಲು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ವ್ಯಂಗ್ಯ ಮತ್ತು ವಿಡಂಬನೆಯಲ್ಲಿಯೇ ಬಾಲ್ಯವಿವಾಹದ ಕತೆ ಓದುಗರಿಗೆ ನಗಿಸುತ್ತಲೇ ಬಾಲ್ಯವಿವಾಹದ ಪರಿಣಾಮವನ್ನು ಹೇಳುತ್ತದೆ. ಚಾಕ್ಲೆಟ್ ಕತೆಯಲ್ಲಿ ಪ್ರೀತಿ ಪ್ರೇಮ, ಕೋಮು ಗಲಭೆಯಾಗಿ ಬದಲಾಗುವ ವಿಷಯವನ್ನು ನಾಜೂಕಾಗಿ ಹೆಣೆಯಲಾಗಿದೆ. ಕುಂಟಕಾಗಿ, ಉಡ, ಮುಂತಾದ ಕತೆಗಳು ವಿಶಿಷ್ಟ ನಿರೂಪಣೆಯಿಂದಾಗಿ ಗಮನಸೆಳೆಯುತ್ತವೆ. ರೊಟ್ಟಿ ಬೆಂಡಿಕಾಯಿ ಚಟ್ನಿ ನಗರೀಕರಣದ ಬದುಕು ಒಂಟಿಯಾಗಿಸುವ ಪರಿಯನ್ನು ಬಿಚ್ಚಿಡುತ್ತ ಹೋಗುತ್ತದೆ. ಅಜ್ಜ ಮೊಮ್ಮಗನ ವಾತ್ಸಲ್ಯದ ಈ ಕತೆ ಬಹುತೇಕವಾಗಿ ಉದ್ಯೋಗವರಸಿ ಬೆಂಗಳೂರು ಸೇರಿದವರೊಂದಿಗೆ ಕನೆಕ್ಟ್ ಆಗುತ್ತದೆ. ಒಂಬತ್ತು ಕತೆಗಳು ಒಂಬತ್ತು ವೈವಿಧ್ಯಮಯವ ವಿಷಯವನ್ನು ಹೆಣೆಯಲಾಗಿದೆ. ಬಳ್ಳಾರಿ ಸೀಮೆಯ ಭಾಷೆ ಓದುಗರ ಓಘವನ್ನು ಎಲ್ಲಿಯೂ ಕಡಿಮೆ ಮಾಡದು.
ಪುಸ್ತಕ: ಎಡೆ (ಕಥಾ ಸಂಕಲನ)ಲೇ: ಪ್ರವೀಣ್ ಕುಮಾರ್ ಜಿಪ್ರ: ಒಲವು ಬರಹ ಸಂ: 9845845747ಪುಟ: 121 ಬೆಲೆ: ₹150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.