ADVERTISEMENT

ಉದ್ಯೋಗ ಮೀಸಲಾತಿ: ಕನ್ನಡಿಗರ ಕ್ಷಮೆ ಕೋರಿದ ಫೋನ್‌ಪೇ ಸಿಇಒ ಸಮೀರ್ ನಿಗಮ್‌

ಪಿಟಿಐ
Published 21 ಜುಲೈ 2024, 16:19 IST
Last Updated 21 ಜುಲೈ 2024, 16:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ರೂಪಿಸಿದ್ದ ನೀತಿಯನ್ನು ಖಂಡಿಸಿದ್ದ ಫೋನ್‌ಪೇ ಸಿಇಒ ಮತ್ತು ಸಂಸ್ಥಾಪಕ ಸಮೀರ್ ನಿಗಮ್‌ ಭಾನುವಾರ, ಭೇಷರತ್‌ ಆಗಿ ಕ್ಷಮೆಯಾಚಿಸಿದ್ದಾರೆ.

ಕಂಪನಿಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ಕನ್ನಡಿಗರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಸರ್ಕಾರವು ಮಸೂದೆ ಮಂಡಿಸಲು ನಿರ್ಧರಿಸಿತ್ತು. ಖಾಸಗಿ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ತಾತ್ಕಾಲಿಕವಾಗಿ ತಡೆ ಹಿಡಿದಿದೆ. 

ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ್ದ ನಿಗಮ್‌, ‘ಸರ್ಕಾರದ ಈ ನಿರ್ಧಾರವು ನಾಚಿಕೆಗೇಡಿನ ಸಂಗತಿ ಯಾಗಿದೆ’ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಫೋನ್‌ ಪೇ ಬದಲಿಗೆ ಬೇರೆ ಯುಪಿಐ ಆ್ಯಪ್‌ ಬಳಸುವಂತೆ ಅಭಿಯಾನ ಆರಂಭಿಸಿದ್ದರು. ‘ಬಾಯ್ಕಾಟ್‌ ಫೋನ್‌ಪೇ’ ಅಭಿಯಾನವು ತೀವ್ರಗೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸಿಇಒ ನಿಗಮ್‌ ಕನ್ನಡಿಗರ ಕ್ಷಮೆ ಕೋರಿದ್ದಾರೆ.

ADVERTISEMENT

‘ಫೋನ್‌ಪೇ ಬೆಂಗಳೂರಿನಲ್ಲಿ ಆರಂಭಗೊಂಡಿತು. ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಬೆಂಗಳೂರು ವಿಶ್ವದರ್ಜೆಯ ತಂತ್ರಜ್ಞಾನ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗಿರುವ ನಗರವಾಗಿದೆ. ಇಲ್ಲಿ ಫೋನ್‌ಪೇ ತನ್ನ ಬೇರುಗಳನ್ನು ಗಟ್ಟಿಯಾಗಿ ಹೊಂದಿರುವುದು ಹೆಮ್ಮೆಯ ವಿಷಯ’ ಎಂದು ಹೇಳಿದ್ದಾರೆ.

‘ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳನ್ನು ಓದಿದೆ. ಇದಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಕರ್ನಾಟಕ ಮತ್ತು ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ಹೇಳಿದ್ದಾರೆ.

‘ನನಗೆ ಕನ್ನಡ ಸೇರಿ ದೇಶದ ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ಅತೀವ ಗೌರವವಿದೆ. ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ, ಪರಂಪರೆಯು ದೇಶದ ಆಸ್ತಿಯಾಗಿದೆ. ಇದಕ್ಕೆ ಎಲ್ಲಾ ಭಾರತೀಯರು ಹೆಮ್ಮೆಪಡಬೇಕಿದೆ’ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆರಂಭಗೊಂಡ ಫೋನ್‌ಪೇ ಕಂಪನಿಯ ಬೇರುಗಳು ದೇಶದಾದ್ಯಂತ ವಿಸ್ತರಿಸಿವೆ. 55 ಕೋಟಿಗೂ ಹೆಚ್ಚು ಬಳಕೆದಾರರ ಸುರಕ್ಷಿತ ಡಿಜಿಟಲ್‌ ಪಾವತಿಗೆ ನೆರವಾಗಿದೆ ಎಂದು ಹೇಳಿದ್ದಾರೆ.

‘ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಕನ್ನಡಿಗರಿಗೆ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ನಾನು ಸಹಾಯ ಮಾಡಲು ಸಿದ್ಧ. ಸುಸ್ಥಿರವಾದ ಉದ್ಯೋಗದ ದಾರಿಯನ್ನು ಸೃಷ್ಟಿಸಬೇಕಿದೆ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕಿದೆ’ ಎಂದು ತಿಳಿಸಿದ್ದಾರೆ.

ಬೆಂಗಳೂರು ಮುಂಚೂಣಿ: 

ಫೋನ್‌ಪೇ ಮೂಲಕ ಅತಿಹೆಚ್ಚು ವಹಿವಾಟು ಮತ್ತು ಬಳಕೆದಾರರನ್ನು ಹೊಂದಿರುವ ದೇಶದ ಪ್ರಮುಖ 10 ಜಿಲ್ಲೆಗಳ ಪೈಕಿ ಬೆಂಗಳೂರು ಮುಂಚೂಣಿಯಲ್ಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.