ADVERTISEMENT

Lok Sabha | ಬ್ಯಾಂಕಿಂಗ್‌ ಮಸೂದೆ ಮಂಡನೆ

ಬ್ಯಾಂಕ್‌ಗಳ ಆಡಳಿತ ಸುಧಾರಣೆ, ಠೇವಣಿದಾರರ ರಕ್ಷಣೆಗೆ ಒತ್ತು: ಕೇಂದ್ರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 23:35 IST
Last Updated 9 ಆಗಸ್ಟ್ 2024, 23:35 IST
<div class="paragraphs"><p>ನಿರ್ಮಲಾ ಸೀತಾರಾಮನ್‌ </p></div>

ನಿರ್ಮಲಾ ಸೀತಾರಾಮನ್‌

   

–ಪಿಟಿಐ ಚಿತ್ರ

ನವದೆಹಲಿ: ಬ್ಯಾಂಕ್‌ಗಳ ಆಡಳಿತ ಸುಧಾರಣೆ ಮತ್ತು ಠೇವಣಿದಾರರ ಹಿತರಕ್ಷಣೆಗಾಗಿ ಲೋಕಸಭೆಯಲ್ಲಿ ಬ್ಯಾಂಕಿಂಗ್‌ ಕಾನೂನು (ತಿದ್ದುಪಡಿ) ಮಸೂದೆ–2024 ಮಂಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ADVERTISEMENT

ಕಳೆದ ವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಮಸೂದೆ ಮಂಡನೆಗೆ ಒಪ್ಪಿಗೆ ನೀಡಿತ್ತು.

ಅಲ್ಲದೆ, 1924ರ ಭಾರತೀಯ ರಿಸರ್ವ್ ಬ್ಯಾಂಕ್‌ ಕಾಯ್ದೆ, 1949ರ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ, 1955ರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಾಯ್ದೆ, 1970ರ ಬ್ಯಾಂಕಿಂಗ್‌ ಕಂಪನಿಗಳ (ಸಂಸ್ಥೆಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ ಹಾಗೂ  1980ರ ಬ್ಯಾಂಕಿಂಗ್‌ ಕಂಪನಿಗಳ (ಸಂಸ್ಥೆಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗೆ ತಿದ್ದುಪಡಿ ಬಗ್ಗೆಯೂ ಒಪ್ಪಿಗೆ ಸೂಚಿಸಿತ್ತು. 

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ತಿದ್ದುಪಡಿ ಬಗ್ಗೆ 2023–24ರ ಬಜೆಟ್‌ ಅಧಿವೇಶನದಲ್ಲಿಯೂ ಹಣಕಾಸು ಸಚಿವರು ಪ್ರಸ್ತಾಪಿಸಿದ್ದರು. 

ಪ್ರತಿಪಕ್ಷಗಳ ವಿರೋಧ:

ಕಾಂಗ್ರೆಸ್ ಸಂಸದ ಮನೀಶ್‌ ತಿವಾರಿ ಅವರು, ಮಸೂದೆಗೆ ವಿರೋಧ ವ್ಯಕ್ತಪಡಿಸಿದರು. ‘ಸಹಕಾರ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಶಾಸನ ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕಿದೆ’ ಎಂದು ಒತ್ತಾಯಿಸಿದರು. ಇದಕ್ಕೆ ಆರ್‌ಎಸ್‌ಪಿ ಸಂಸದ ಎನ್‌.ಕೆ. ‌ಪ್ರೇಮಚಂದ್ರನ್ ಕೂಡ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಸಹಕಾರ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯಲ್ಲಿ ಕೇವಲ ಒಂದು ಅಥವಾ ಎರಡು ತಿದ್ದುಪಡಿಯನ್ನಷ್ಟೇ ಮಾಡಿಲ್ಲ. ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ’ ಎಂದು ಸಮರ್ಥಿಸಿಕೊಂಡರು.

ಬ್ಯಾಂಕಿಂಗ್‌ ಹೆಸರಿನಡಿ ಸಹಕಾರ ಬ್ಯಾಂಕ್‌ಗಳ ಆಶಯಕ್ಕೆ ಧಕ್ಕೆ ತರುವುದಿಲ್ಲ. ಅವುಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಕ್ಕೆ ಸರ್ಕಾರ ಮುಂದಾಗುತ್ತಿಲ್ಲ‌. ತಿದ್ದುಪಡಿಗಳು ಮತ್ತು ನ್ಯಾಯಾಲಯದ ತೀರ್ಪುಗಳು ಈ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುತ್ತವೆ  ಎಂದರು.

ಅಧಿಕಾರಾವಧಿ ವಿಸ್ತರಣೆ
ಪ್ರಸ್ತುತ ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ (ಅಧ್ಯಕ್ಷ ಮತ್ತು ಪೂರ್ಣಕಾಲಿಕ ನಿರ್ದೇಶಕರನ್ನು ಹೊರತುಪಡಿಸಿ) ಅಧಿಕಾರಾವಧಿಯು 8 ವರ್ಷ ಇದೆ. ತಿದ್ದುಪಡಿ ಮಸೂದೆಯಲ್ಲಿ ಈ ಅವಧಿಯನ್ನು 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕರು ರಾಜ್ಯ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಭಾವನೆ ನಿರ್ಧಾರ
ಸರ್ಕಾರವು ಬ್ಯಾಂಕ್‌ಗಳಿಗೆ ಲೆಕ್ಕ ಪರಿಶೋಧಕರನ್ನು ನೇಮಕ ಮಾಡುತ್ತದೆ. ಅವರಿಗೆ ಎಷ್ಟು ಸಂಭಾವನೆ ನೀಡಬೇಕು ಎಂಬ ಸ್ವಾತಂತ್ರ್ಯವನ್ನು ಬ್ಯಾಂಕ್‌ ನೀಡಲಾಗಿದೆ. ಲೆಕ್ಕ ಪರಿಶೋಧಕರ ಕಾರ್ಯ ನಿರ್ವಹಣೆಗೆ ಅನುಗುಣವಾಗಿ ಬ್ಯಾಂಕ್‌ಗಳು ಸಂಭಾವನೆ ನಿಗದಿಪಡಿಸಬಹುದಾಗಿದೆ.
ಆರ್‌ಬಿಐಗೆ ವರದಿ ಸಲ್ಲಿಕೆ 
ಪ್ರಸ್ತುತ ಬ್ಯಾಂಕ್‌ಗಳು ನಿಯಮಾವಳಿ ಅನ್ವಯ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರ ವರದಿ ಸಲ್ಲಿಸುವುದು ಕಡ್ಡಾಯ. ತಿದ್ದುಪಡಿ ಮಸೂದೆಯಲ್ಲಿ ಪ್ರತಿ ತಿಂಗಳ 15ರಂದು ಮತ್ತು ಕೊನೆಯ ದಿನದಂದು ವರದಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.   ಈಗ ನಿಗದಿ‍ಪಡಿಸಿರುವ ಅವಧಿಯು ಪರಿಣಾಕಾರಿ ಹಾಗೂ ನಿಖರವಾದ ವರದಿ ಸಲ್ಲಿಕೆಗೆ ತೊಡಕಾಗಿದೆ. ಹಾಗಾಗಿ ಇದನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹೇಳಿದೆ.
ನಿರ್ದೇಶಕರ ಆಸ್ತಿ ಮೌಲ್ಯದ ಮಿತಿ ಏರಿಕೆ
ಕಳೆದ ಆರು ದಶಕದಿಂದಲೂ ಕಂಪನಿಗಳ ನಿರ್ದೇಶಕರ ಆಸ್ತಿ ಮೌಲ್ಯದ ಮಿತಿ ಹೆಚ್ಚಿರಲಿಲ್ಲ. ಈ ಮಸೂದೆಯಲ್ಲಿ ಮಿತಿಯನ್ನು ಹೆಚ್ಚಿಸಲಾಗಿದೆ. ಯಾವುದೇ ಕಂಪನಿಯಲ್ಲಿ ನಿರ್ದೇಶಕರು ₹5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಸ್ತಿಯ ಒಡೆತನ ಹೊಂದಿದ್ದರೆ ಅದನ್ನು ‘ಸಬ್​ಸ್ಟಾನ್ಷಿಯಲ್ ಇಂಟರೆಸ್ಟ್’ ಎಂದು ನಿರ್ಧರಿಸಲಾಗುತ್ತದೆ. ಅಂತಹ ನಿರ್ದೇಶಕರಿಗೆ ಸಾಲ ನೀಡಲು ಆಡಳಿತ ಮಂಡಳಿಯ ಅನುಮೋದನೆ ಪಡೆಯುವುದು ಕಡ್ಡಾಯ. ಮಸೂದೆ ಪ್ರಕಾರ ನಿರ್ದೇಶಕರು ₹4 ಕೋಟಿ ಮೊತ್ತದ ಷೇರುಗಳ ಒಡೆತನ ಅಥವಾ ಮಾಲೀಕತ್ವ ಹೊಂದಿದ್ದರೆ ಈ ಮಾನದಂಡವನ್ನು ಪರಿಗಣಿಸಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.