ಬೆಂಗಳೂರು: ಕೃಷಿ ಉತ್ಪಾದಕರ ಸಂಸ್ಥೆಗಳ (ಎಫ್ಪಿಒ) ಸಬಲೀಕರಣಕ್ಕಾಗಿ ಕೃಷಿ ಕಲ್ಪ ಸಂಸ್ಥೆ ಹಾಗೂ ನಬಾರ್ಡ್ನಿಂದ ಇತ್ತೀಚೆಗೆ ದೇಶದ ಮೊದಲ ಆಕ್ಸಲರೇಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಎಫ್ಪಿಒಗಳು ಸುಸ್ಥಿರ ಗ್ರಾಮೀಣ ಉದ್ಯಮಗಳಾಗಿ ರೂಪುಗೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ. ಇದು ಕೃಷಿ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ನಗರದ ಜೆ.ಪಿ. ನಗರದಲ್ಲಿರುವ ಆರ್.ವಿ. ಡೆಂಟಲ್ ಕ್ಯಾಂಪಸ್ನಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ, ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಹಾಗೂ ಅತೀಕ್ ಎಲ್.ಕೆ. ಅವರು ಈ ಆಕ್ಸಲರೇಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಫ್ಪಿಒಗಳಿಗೆ ಪರಿಣಾಮಕಾರಿಯಾಗಿ ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಲು ಸನ್ನದ್ಧಗೊಳಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಸದಸ್ಯ ರೈತರಿಗೆ ಹೆಚ್ಚುವರಿ ಆದಾಯ ಗಳಿಸಲು ಆದ್ಯತೆ ನೀಡುತ್ತದೆ.
‘ಎಫ್ಪಿಒಗಳು ಯಶಸ್ವಿ ಉದ್ಯಮಗಳಾಗಿ ಮುನ್ನಡೆಯಲು ಅಗತ್ಯವಿರುವ ಕೌಶಲಗಳ ನಿರ್ಮಾಣಕ್ಕೆ ಒತ್ತು ನೀಡಲಿದೆ. ಅವುಗಳ ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವ ಜೊತೆಗೆ ಲಾಭದಾಯಕದತ್ತ ಕೊಂಡೊಯ್ಯಲು ನೆರವಾಗಲಿದೆ’ ಎಂದು ಕೃಷಿ ಕಲ್ಪ ಸಂಸ್ತೆಯ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ತಿಳಿಸಿದ್ದಾರೆ.
ಕೃಷಿ ಕಲ್ಪ ಸಂಸ್ಥೆಯು ಸುಸ್ಥಿರ ಮತ್ತು ಗ್ರಾಮೀಣ ಉದ್ಯಮಗಳ ಪರಿವರ್ತನೆಗೆ ವೇಗ ತುಂಬುವ ಗುರಿ ಹೊಂದಿದೆ. ಇದಕ್ಕೆ ನಬಾರ್ಡ್ ನೆರವು ನೀಡುತ್ತಿದೆ. ಕೃಷಿ ವ್ಯವಸ್ಥೆಯಲ್ಲಿ ಸದೃಢತೆ, ಸಂಪತ್ತು ಮತ್ತು ಸುಸ್ಥಿರತೆ ತರುವ ಮೂಲಕ ಸಕಾರಾತ್ಮಕ ಬದಲಾವಣೆ ತರಲು ಸಜ್ಜಾಗಿದ್ದೇವೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.