ADVERTISEMENT

ತೆರಿಗೆ ಹೊರೆ ಇಳಿಸಿ: ಸಚಿವೆ ನಿರ್ಮಲಾಗೆ ಕೈಗಾರಿಕಾ ಒಕ್ಕೂಟದ ಮನವಿ

ಪಿಟಿಐ
Published 20 ಜೂನ್ 2024, 15:23 IST
Last Updated 20 ಜೂನ್ 2024, 15:23 IST
ಬಜೆಟ್‌ ಪೂರ್ವ ಸಮಾಲೋಚನೆ ಕುರಿತಂತೆ ನವದೆಹಲಿಯಲ್ಲಿ ಗುರುವಾರ ಕೈಗಾರಿಕಾ ವಲಯದ ಮುಖಂಡರು ಮತ್ತು ಒಕ್ಕೂಟಗಳೊಟ್ಟಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಭೆ ನಡೆಸಿದರು –ಪಿಟಿಐ ಚಿತ್ರ
ಬಜೆಟ್‌ ಪೂರ್ವ ಸಮಾಲೋಚನೆ ಕುರಿತಂತೆ ನವದೆಹಲಿಯಲ್ಲಿ ಗುರುವಾರ ಕೈಗಾರಿಕಾ ವಲಯದ ಮುಖಂಡರು ಮತ್ತು ಒಕ್ಕೂಟಗಳೊಟ್ಟಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಭೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ದೇಶದ ಜನಸಾಮಾನ್ಯರು ಅತಿಯಾದ ತೆರಿಗೆ ಹೊರೆಯಿಂದ ಪರಿತಪಿಸುತ್ತಿದ್ದು, ಅದನ್ನು ಇಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟಗಳು ಒತ್ತಾಯಿಸಿವೆ. 

ಗುರುವಾರ ನಡೆದ 2024–25ನೇ ಆರ್ಥಿಕ ಸಾಲಿನ ಬಜೆಟ್‌ ಪೂರ್ವ ಸಮಾಲೋಚನಾ ಸಭೆಯಲ್ಲಿ ಕೈಗಾರಿಕಾ ವಲಯದ ಮುಖಂಡರು ಮತ್ತು ಒಕ್ಕೂಟದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸರ್ಕಾರವು ಬಂಡವಾಳ ವೆಚ್ಚವನ್ನು ಹೆಚ್ಚಿಸಬೇಕು. ಆಹಾರ ಹಣದುಬ್ಬರದ ಇಳಿಕೆಗೆ ಸಂಬಂಧಿಸಿದಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕಿದೆ ಎಂದು ಸಲಹೆ ಮುಂದಿಟ್ಟರು.

ADVERTISEMENT

ದೇಶದ ಆರ್ಥಿಕತೆಗೆ ಮತ್ತಷ್ಟು ವೇಗ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮೂಲ ಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ ಎಂದು ಕೋರಿದರು. 

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್‌ಎಂಇ) ದೇಶದ ಆರ್ಥಿಕತೆಯ ಬೆನ್ನೆಲುಬಾಗಿವೆ. ಈ ವಲಯದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಹಾಗಾಗಿ, ವಲಯದ ಬಲವರ್ಧನೆಗೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಸಂಜೀವ್‌ ಪುರಿ,  ‘ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡಬೇಕು. ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯನ್ನು ಮತ್ತಷ್ಟು ಸುಗಮಗೊಳಿಸಬೇಕು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ಎಫ್‌ಐಸಿಸಿಐ ಅಧ್ಯಕ್ಷ ಸುಭ್ರಕಾಂತ್ ಪಾಂಡ ಮಾತನಾಡಿ, ‘ತೆರಿಗೆ ಪದ್ಧತಿಯನ್ನು ಸರಳೀಕರಿಬೇಕು. ಹಣದುಬ್ಬರ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಸರ್ಕಾರದ ಬಂಡವಾಳ ವೆಚ್ಚವನ್ನು ಹೆಚ್ಚಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.