ನವದೆಹಲಿ: ಭಾರತದ ಆರ್ಥಿಕತೆಯು ನಿರೀಕ್ಷೆಗೂ ಮೀರಿ ಅತಿ ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಜಾಗತಿಕ ಸಂಸ್ಥೆಯಾದ ಆಕ್ಸ್ಫರ್ಡ್ ಎಕನಾಮಿಕ್ಸ್' ಅಭಿಪ್ರಾಯಪಟ್ಟಿದೆ.
ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಸರಾಸರಿ ಶೇಕಡ 6ಕ್ಕಿಂತ ಹೆಚ್ಚಾಗಿರಲಿದೆ ಎಂದು ವಿಶ್ಲೇಷಿಸಿದೆ.
‘ಹಣದುಬ್ಬರವು ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಪೂರ್ವದಲ್ಲಿ ಇದ್ದ ಸ್ಥಿತಿಗೆ ಬಂದಿದೆ. ಇಂಧನ ಹೊರತುಪಡಿಸಿ ಇತರ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅದು ತಿಳಿಸಿದೆ.
ತರಕಾರಿಗಳು ಮತ್ತು ಮೊಟ್ಟೆಗಳು ದುಬಾರಿಯಾಗಿರುವುದರಿಂದ ಹಣದುಬ್ಬರವು ಅಕ್ಟೋಬರ್ನಲ್ಲಿ ಹೆಚ್ಚಾಗಿದೆ. ಸೆಪ್ಟೆಂಬರ್ನಲ್ಲಿ 7.27 ಹಣದುಬ್ಬರವಿತ್ತು. ಇದೇ ವೇಳೆ, ವಿವಿಧ ರೀತಿಯ ಚಟುವಟಿಕೆಗಳಿಗೆ ಚಾಲನೆ ದೊರೆತಿರುವುದರಿಂದ ಮತ್ತು ಇವುಗಳಿಂದ ದೊರೆತ ಆರ್ಥಿಕ ಪರಿಸ್ಥಿತಿಯ ಮಾಹಿತಿಯನ್ನು ವಿಶ್ಲೇಷಿಸಿದಾಗ ಆರ್ಥಿಕತೆಯು ನಿರೀಕ್ಷೆಗೂ ಮೀರಿ ಚೇತರಿಸಿಕೊಳ್ಳುತ್ತಿದೆ ಎಂದು ಆಕ್ಸ್ಫರ್ಡ್ ಎಕನಾಮಿಕ್ಸ್ ತಿಳಿಸಿದೆ.
ಮೂಡಿಸ್ ಇನ್ವೆಸ್ಟರ್ ಸರ್ವಿಸ್ ಸಹ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಸಹ ಹೆಚ್ಚಳವಾಗಲಿದೆ ಎಂದು ವಿಶ್ಲೇಷಿಸಿದೆ. ರಾಷ್ಟ್ರಾದ್ಯಂತ ಸುದೀರ್ಘ ಅವಧಿಗೆ ಹೇರಿದ್ದ ಲಾಕ್ಡೌನ್ನಿಂದ ಆರ್ಥಿಕತೆ ಪುನಶ್ಚೇತನದ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಕ್ರಮಬದ್ಧವಾಗಿ ಸಾಗುತ್ತಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.