ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಲ್ಲಿಯೇ ಪರಿಹಾರ ಸೆಸ್ ಅನ್ನು ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 10 ಸಚಿವರ ಸಮಿತಿಯ ಮೊದಲ ಸಭೆಯಲ್ಲಿ ಚರ್ಚಿಸಲಾಗಿದೆ.
‘ಎಲ್ಲಾ ರಾಜ್ಯಗಳು ಜಿಎಸ್ಟಿ ಅಡಿ ಈ ಸೆಸ್ ಅನ್ನು ವಿಲೀನಗೊಳಿಸುವಂತೆ ಶಿಫಾರಸು ಮಾಡಿವೆ’ ಎಂದು ಮೂಲಗಳು ತಿಳಿಸಿವೆ.
ಪರಿಹಾರ ಸೆಸ್ಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಈ ಸಮಿತಿ ರಚಿಸಲಾಗಿದೆ. ಜಿಎಸ್ಟಿ ಅಡಿ ಸೆಸ್ ವಿಲೀನಗೊಂಡರೆ ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳು ಮತ್ತು ಐಷಾರಾಮಿ ಸರಕುಗಳ ಮೇಲೆ ವಿಧಿಸುವ ತೆರಿಗೆ ಪಟ್ಟಿಗೆ ಹೊಸ ಸರಕುಗಳನ್ನು ಸೇರ್ಪಡೆಗೊಳಿಸಲು ಅವಕಾಶ ಇರುವುದಿಲ್ಲ.
ಪರಿಹಾರ ಸೆಸ್ ಅವಧಿಯು 2026ರ ಮಾರ್ಚ್ಗೆ ಅಂತ್ಯಗೊಳ್ಳಲಿದೆ. ಸಮಿತಿಯು ಈ ಬಗ್ಗೆ ಪರಿಶೀಲನೆ ನಡೆಸಿ ಡಿಸೆಂಬರ್ 31ರೊಳಗೆ ವರದಿ ಸಲ್ಲಿಸಲಿದೆ.
‘ಪರಿಹಾರ ಸೆಸ್ ಅನ್ನು ಭವಿಷ್ಯದಲ್ಲಿ ಯಾವ ರೂಪದಲ್ಲಿ ಸಂಗ್ರಹಿಸಬೇಕು ಎಂಬ ಬಗ್ಗೆ ಸಮಿತಿಯು ಚರ್ಚಿಸಲಿದೆ. ಪ್ರತಿ ರಾಜ್ಯವೂ ತನ್ನದೆ ಆದ ಅಭಿಪ್ರಾಯ ಮಂಡಿಸಿದೆ’ ಎಂದು ಸಭೆಯ ಬಳಿಕ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
‘ಇದನ್ನು ಮುಂದುವರಿಸಬೇಕೇ, ಜಿಎಸ್ಟಿ ಅಡಿ ವಿಲೀನಗೊಳಿಸಬೇಕೇ, ಸೆಸ್ ವಿಧಿಸುವ ಪಟ್ಟಿಯಲ್ಲಿರುವ ಸರಕುಗಳನ್ನು ಪರಿಷ್ಕರಿಸಬೇಕೇ ಎಂಬ ಬಗ್ಗೆ ಚರ್ಚೆ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.
ಮುಂದಿನ ಸಭೆಯು ನವೆಂಬರ್ ಎರಡನೇ ವಾರದಲ್ಲಿ ನಡೆಯಲಿದೆ.
ಸಚಿವರ ಸಮಿತಿಯಲ್ಲಿ ಅಸ್ಸಾಂ, ಛತ್ತೀಸಗಢ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಇವೆ.
2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೊಂಡಿತು. ಈ ವೇಳೆ ರಾಜ್ಯಗಳಿಗೆ ಆಗುವ ವರಮಾನದ ನಷ್ಟವನ್ನು ಮುಂದಿನ ಐದು ವರ್ಷದವರೆಗೆ ಭರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಹಾಗಾಗಿ, 2022ರ ಜೂನ್ವರೆಗೆ ಜಿಎಸ್ಟಿ ಪರಿಹಾರ ವ್ಯವಸ್ಥೆ ಜಾರಿಯಲ್ಲಿತ್ತು. ನಂತರ ಇದನ್ನು 2026ರ ವರೆಗೆ ವಿಸ್ತರಿಸಲಾಗಿದೆ.
ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳು ಮತ್ತು ಐಷಾರಾಮಿ ಸರಕುಗಳ ಮೇಲೆ ಶೇ 28ರಷ್ಟು ಹಾಗೂ ಅದಕ್ಕೂ ಹೆಚ್ಚು ಜಿಎಸ್ಟಿ ವಿಧಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.