ಬೆಂಗಳೂರು: ನೆಸ್ಲೆ ಇಂಡಿಯಾ ಕಂಪನಿಯ ಇನ್ಸ್ಟಂಟ್ ಕಾಫಿ ಬ್ರ್ಯಾಂಡ್ ಆದ ‘ನೆಸ್ಕೆಫೆ ಸನ್ರೈಸ್’ನಿಂದ ಕಾಫಿ ಬೆಳೆಗಾರರ ಶ್ರಮವನ್ನು ಗೌರವಿಸಲು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಅಭಿಯಾನದ ಅಂಗವಾಗಿ ನೆಸ್ಕೆಫೆ ಸನ್ರೈಸ್ನಿಂದ ಐದು ಹೊಸ ಪ್ಯಾಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಪ್ಯಾಕ್ನಲ್ಲಿ ಆಯಾ ಭಾಗದ ಆಯ್ದ ಐವರು ರೈತರ ಭಾವಚಿತ್ರ ಪ್ರಕಟಿಸಲಾಗಿದೆ. ಈ ಪ್ಯಾಕ್ ಮೇಲೆ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಈ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ನೆಸ್ಲೆ ಇಂಡಿಯಾದೊಟ್ಟಿಗೆ ಆ ರೈತರು ಬೆಸೆದುಕೊಂಡಿರುವ ಪಯಣವು ತೆರೆದುಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.
2012ರಲ್ಲಿ ಭಾರತದಲ್ಲಿ ನೆಸ್ಕೆಫೆ ಯೋಜನೆ ಅನುಷ್ಠಾನಗೊಂಡಿದೆ. ಉತ್ತಮ ಕೃಷಿ ವಿಧಾನ ಅನುಸರಿಸುವಿಕೆ, ಭೂ ಪ್ರದೇಶದ ಸುಸ್ಥಿರ ನಿರ್ವಹಣೆ ಮತ್ತು ಕಾಫಿ ತೋಟಗಳ ವೈವಿಧ್ಯ ಕಾಪಾಡುವುದು ಈ ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದೆ.
ಕಾಫಿ ಕೃಷಿ ಬಗೆಗಿನ ರೈತರ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಧಾನಗಳನ್ನು ಒಗ್ಗೂಡಿಸುವ ಮೂಲಕ ಸುಸ್ಥಿರ ಕಾಫಿ ಕೃಷಿಗೆ ಒತ್ತು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ 5 ಸಾವಿರಕ್ಕೂ ಹೆಚ್ಚು ಬೆಳೆಗಾರರೊಟ್ಟಿಗೆ ನೆಸ್ಲೆ ಇಂಡಿಯಾ ಈ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದೆ.
ಗುಣಮಟ್ಟದ ಕಾಫಿ ಬೆಳೆಯಲು ಶ್ರಮಿಸುತ್ತಿರುವ ಬೆಳೆಗಾರರಿಗೆ ಗೌರವ ಸಲ್ಲಿಕೆ ಮತ್ತು ಅವರೊಟ್ಟಿಗೆ ಕೆಲಸ ನಿರ್ವಹಿಸುವ ನೆಸ್ಲೆಯ ಕೃಷಿ ವಿಜ್ಞಾನಿಗಳಿಗೆ ಗೌರವ ಸಲ್ಲಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.